ಶುಕ್ರವಾರ ಬೆಳಗ್ಗೆ ಹಾವೇರಿ ಜಿಲ್ಲೆಯ ಮೈಲಾರಕ್ಕೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೈಲಾರ ಲಿಂಗೇಶ್ವರನಲ್ಲಿ ಕ್ಷಮೆ ಯಾಚಿಸಿದ್ದಾರೆ. ಜೊತೆಗೆ ಮೈಲಾರಲಿಂಗೇಶ್ವರನಿಗೆ ಬೆಳ್ಳಿಯ ಹೆಲಿಕಾಪ್ಟರ್ ಒಪ್ಪಿಸಿದ್ದಾರೆ.
ಮೈಲಾರದಿಂದ ನೇರವಾಗಿ ಬೆಳಗಾವಿಗೆ ಆಗಮಿಸಿದ್ದ ಶಿವಕುಮಾರ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು. ಈ ಹಿಂದೆ ಮೈಲಾರಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಿದ್ದೆ. ಆದರೆ ಅಲ್ಲಿಗೆ ಹೆಲಿಕಾಪ್ಟರ್ ನಲ್ಲಿ ಹೋಗುವುದು ತಪ್ಪು ಎಂದು ಕಾರ್ಯಕರ್ತರು ತಿಳಿಸಿದರು. ಜೊತೆಗೆ ಅವರು ಅದಕ್ಕಾಗಿ ಹರಕೆಯನ್ನೂ ಹೊತ್ತಿದ್ದರು. ಹಾಗಾಗಿ ನಾನು ಅಲ್ಲಿಗೆ ತೆರಳಿ ಮೈಲಾರ ಲಿಂಗೇಶ್ವರನಲ್ಲಿ ಕ್ಷಮೆಯಾಚಿಸಿದ್ದೇನೆ. ಜೊತೆಗೆ ರಾಜ್ಯದ ಜನರಿಗೆ ಆರೋಗ್ಯ, ಸಂಪತ್ತು ಕೊಡು ಎಂದು ಕೇಳಿದ್ದೇನೆ ಎಂದು ತಿಳಿಸಿದರು.
ಬೆಳಗಾವಿ ಲೋಕಸಭೆಗೆ ಇಬ್ಬರ ಹೆಸರು
ಇದೇ ವೇಳೆ ಬೆಳಗಾವಿ ಲೋಕಸಭಾ ಉಪಚುನಾವಣೆ ಕುರಿತು ಮಾತನಾಡಿದ ಅವರು, ನಾವು ಎರಡು ಹೆಸರನ್ನು ಅಂತಿಮಗೊಳಿಸಿ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆ ಸಂಬಂಧ ಈಗಾಗಲೆ ಸಭೆ ನಡೆಸಿ ಚರ್ಚಿಸಿದ್ದೇವೆ. ಅಗತ್ಯವಾದರೆ ಇನ್ನೂ ಒಂದೆರಡು ಸಭೆ ನಡೆಸುತ್ತೇವೆ. ಬಹಳ ಜನ ಆಕಾಂಕ್ಷಿಗಳಿದ್ದಾರೆ. ನಾವು ಎರಡು ಹೆಸರು ಅಂತಿಮಗೊಳಿಸಿ ಇಟ್ಟುಕೊಂಡಿದ್ದೇವೆ ಎಂದರು.
ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸತೀಶ್ ಜಾರಕಿಹೊಳಿ ಹೆಸರೂ ಕೇಳಿ ಬರುತ್ತಿರುವ ಕುರಿತು ಪ್ರಶ್ನಿಸಿದಾಗ, ಸತೀಶ್ ಜಾರಕಿಹೊಳಿ ಕೇವಲ ಬೆಳಗಾವಿ ಜಿಲ್ಲೆಗಷ್ಟೇ ಅಲ್ಲ, ಈ ಭಾಗದ ಪ್ರಮುಖ ನಾಯಕರು ಎಂದರು.
ಸಿಎಂಇಬ್ರಾಹಿಂ ಅವರೊಂದಿಗೆ ಈಗಾಗಲೆ ಮಾತನಾಡಿದ್ದೇನೆ. ಅವರ ನೋವುಗಳನ್ನು ತೋಡಿಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ ಬಂದ ನಂತರ 2 -3 ಬಾರಿ ಶಾಸಕರನ್ನಾಗಿ ಮಾಡಿದ್ದೇವೆ. ಮಂತ್ರಿ ಮಾಡಲು ಸಾಧ್ಯವಾಗಲಿಲ್ಲ ಎಂದು ಡಿ.ಕೆ.ಶಿವಕುಮಾರ ಹೇಳಿದರು
Laxmi News 24×7