ಗಂಗಾವತಿ: ಹೆತ್ತವ್ವನ ಅಗಲಿಕೆಯ ನೋವಿನ ಸುದ್ದಿಯ ಮಧ್ಯೆಯೂ ಎದೆಗುಂದದೆ ಹತ್ತನೇ ತರಗತಿ ಪರೀಕ್ಷೆ ಬರೆದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದ್ದ ತಾಲೂಕಿನ ಕೇಸರಹಟ್ಟಿಯ ವಿದ್ಯಾರ್ಥಿ ಇದೀಗ ಪರೀಕ್ಷೆಯಲ್ಲಿ 370 ಅಂಕ ಗಳಿಸಿ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ.
ಕೇಸರಹಟ್ಟಿ ಗ್ರಾಮದ ಸ್ವಾಮಿ ವಿವೇಕಾನಂದ ಇಂಗ್ಲೀಷ್ ಮೀಡಿಯಂ ಶಾಲೆಯ ಅಡಿವಯ್ಯ ಸ್ವಾಮಿ ಹಿರೇಮಠ 370 ಅಂಕ ಪಡೆದ ವಿದ್ಯಾರ್ಥಿ.
ಮಾ. 20ರಿಂದ ಆರಂಭವಾಗಲಿದ್ದ ಹತ್ತನೇ ತರಗತಿ ಪರೀಕ್ಷೆಗಾಗಿ ಎಲ್ಲ ಸಿದ್ಧತೆಯನ್ನೂ ಅಡಿವಯ್ಯ ಮಾಡಿಕೊಂಡಿದ್ದ. ಇನ್ನೇನು ಮೊದಲ ಪರೀಕ್ಷೆಗೆ ಹೋಗಬೇಕು ಎನ್ನುವಷ್ಟರಲ್ಲಿ ಹೆತ್ತ ತಾಯಿ ವಿಜಯಲಕ್ಷ್ಮಿ ಗಾಯಗೊಂಡು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವ ಸುದ್ದಿ ಬಂದಿತ್ತು. ಆದರೆ ತಾಯಿಯ ಪಾರ್ಥಿವ ಶರೀರ ಹುಬ್ಬಳ್ಳಿಯಿಂದ ಊರಿಗೆ ಬರಲು ನಾಲ್ಕಾರು ಗಂಟೆ ವಿಳಂಬ ಆಗಿದ್ದರಿಂದ ನೋವಿನಲ್ಲೂ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದ. ಇದು ಸಾರ್ವಜನಿಕರಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.ಇದೀಗ ಈ ವಿದ್ಯಾರ್ಥಿ ಇಂಗ್ಲೀಷ್ನಲ್ಲಿ 65, ಕನ್ನಡ 54, ಹಿಂದಿ 71, ಗಣಿತ 67, ವಿಜ್ಞಾನ 59 ಹಾಗೂ ಸಾಮಾಜ ವಿಜ್ಞಾನದಲ್ಲಿ 54 ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ. ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗೆ ಕುಟುಂಬಸ್ಥರು ಮತ್ತು ಸ್ನೇಹಿತರು ಅಭಿನಂದಿಸಿದ್ದಾರೆ.
Laxmi News 24×7