ಬೆಂಗಳೂರು, ಡಿ.14- ಸಾರಿಗೆ ನೌಕರರ ಮುಷ್ಕರ ವಾಪಸ್ ಪಡೆದರೂ ನಿನ್ನೆ ರಾತ್ರಿ ಉಂಟಾದ ಗೊಂದಲ ಹಾಗೂ ಬೆಳಗ್ಗೆ ನೌಕರರ ಸಂಘಟನೆಗಳು ವಿಳಂಬವಾಗಿ ತೆಗೆದುಕೊಂಡ ನಿರ್ಧಾರದಿಂದ ಇಂದೂ ಮಧ್ಯಾಹ್ನದವರೆಗೂ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾರಿಗೆ ನೌಕರರು ಸರ್ಕಾರದೊಂದಿಗೆ ನಡೆಸಿದ ಮಾತುಕತೆ ಫಲ ನೀಡಿದೆ ಎಂದು ಮುಷ್ಕರ ವಾಪಸ್ ಪಡೆಯುತ್ತಿರುವುದಾಗಿ ಸಂಜೆ ಘೋಷಿಸಿದ್ದರು.
ಆದರೆ, ರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮುಷ್ಕರ ಹಿಂಪಡೆಯುತ್ತಿಲ್ಲ. ಮುಷ್ಕರ ಮುಂದುವರೆಸುವುದಾಗಿ ಹೇಳಿದರು. ಅಷ್ಟರಲ್ಲಾಗಲೇ ಹಲವೆಡೆ ಬಸ್ ಸಂಚಾರ ಆರಂಭಗೊಂಡಿತ್ತು.
ನಮ್ಮ ಬೇಡಿಕೆಗಳು ಈಡೇರಿಲ್ಲ. ಮುಷ್ಕರ ಕೈಬಿಟ್ಟಿಲ್ಲ ಎಂದು ಚಾಲಕರು, ನಿರ್ವಾಹಕರು ಬಸ್ಗಳನ್ನು ಬಿಟ್ಟು ಮತ್ತೆ ಪ್ರತಿಭಟನೆಗಿಳಿದರು. ಸಾರ್ವಜನಿಕರು ಹಾಗೂ ಪ್ರಯಾಣಿಕರು ಮತ್ತೆ ಪರದಾಡುವಂತಾಯಿತು. ಸೋಮವಾರವಾದ ಇಂದು ಬೆಳಗ್ಗೆ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗಳು ಸಂಚರಿಸಲಿಲ್ಲ. ಅದೇ ರೀತಿ ರಾಜ್ಯ ರಸ್ತೆ ಸಾರಿಗೆ ಬಸ್ಗಳು ರಸ್ತೆಗಿಳಿದಿರಲಿಲ್ಲ.
ಅತ್ತ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಾರಿಗೆ ಒಕ್ಕೂಟದ ಅಧ್ಯಕ್ಷ ಚಂದ್ರು, ಗೌರವಾಧ್ಯಕ್ಷರೂ ಆದ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮುಷ್ಕರ ವಾಪಸ್ ಪಡೆಯುವ ನಿರ್ಧಾರ ಮಾಡಿದ್ದರೂ 11 ಗಂಟೆಯಾದರೂ ಘೋಷಣೆ ಮಾಡಿರಲಿಲ್ಲ. ಬೆಳಗ್ಗೆ ಕೆಲಸಕ್ಕೆ ಹೋಗುವವರು, ಊರುಗಳಿಗೆ ತೆರಳುವವರು ಬಸ್ಗಳಿಲ್ಲದೆ ಪರದಾಡುವಂತಾಯಿತು. ಸಾರ್ವಜನಿಕರ ಆಕ್ರೋಶ ತೀವ್ರವಾಗಿತ್ತು.