ಮೂಡಲಗಿ : ಕೇಂದ್ರ ಬಿಜೆಪಿ ಸರ್ಕಾರ ದೇಶಕ್ಕೆ ಅನ್ನ ಹಾಕುವ ರೈತರು, ಕಾರ್ಮಿಕರನ್ನು ಕಡೆಗಣಿಸಿದೆ ಎಂದು ಗ್ರಾಪಂ ನೌಕರರ ಸಂಘದ ಸದಸ್ಯ ಕಿಶೋರ ಗಣಾಚಾರಿ ಕಿಡಿಕಾರಿದರು.
ಸಮೀಪದ ಹಳ್ಳೂರ ಗ್ರಾಪಂ.ಸಭಾ ಭವನದಲ್ಲಿ ಆಯೋಜಿಸಲಾದ ಕೇಂದ್ರ-ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ಪತ್ರಿಭಟಿಸಿ ನ.26ರಂದು ಅಖಿಲ ಭಾರತ ಮುಷ್ಕರ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
‘ ರೈತರ ಬೆಳೆಗಳಿಗೆ ಬೆಲೆ ಇಲ್ಲದೆ ಕಂಗಾಲಾಗಿರುವಾಗ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೂಳಿಸಿ ರೈತರನ್ನು ಅದೋಗತಿಗೆ ಒಯ್ಯುತ್ತಿದೆ. ಇದೇ ರೀತಿಯಲ್ಲಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕರಿಗೆ ಸಿಗುವ ಅಲ್ಪ ಸ್ವಲ್ಪ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದೆ ಎಂದು ಹೇಳಿದರು.
‘ ಸರಕಾರದ ಯೋಜನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಬಿಸಿ ಊಟದ ನೌಕರರು ಮತ್ತು ಅಂಗನವಾಡಿ ನೌಕರರು ಕೇಂದ್ರ ಸರಕಾರದ ಹೊಸ ಆರ್ಥಿಕ ನೀತಿಯಿಂದ ಹಾಗೂ ಹೊಸದಾಗಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕೆಲಸ ಕಳೆಸುಕೊಳ್ಳವ ಹಂತದಲ್ಲಿದ್ದಾರೆ ಎಂದು ಆಶಾ ಕಾರ್ಯಕರ್ತೆ ವಿದ್ಯಾ ರಡ್ರಟ್ಟಿ, ಬಂದವ್ವ ಬೋತಪ್ಪಗೋಳ ಮಾತನಾಡಿದರು.
ಗ್ರಾಪಂ ನೌಕರರ ಸಂಘದ ಮೂಡಲಗಿ ತಾಲೂಕಾ ಸಹಕಾರ್ಯದರ್ಶಿ ಮಾಂತೇಶ ಸಂತಿ , ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿ ಊಟದ ಕಾರ್ಯಕರ್ತೆಯರು ಹಾಗೂ ಗ್ರಾಪಂ ನೌಕರರು ಸಭೆಯಲ್ಲಿದ್ದರು.