ಬೆಂಗಳೂರು, ನ.13- ಕಾದಂಬರಿಕಾರ, ಲೇಖಕ, ನಿರೂಪಕ ಹೀಗೆ ನಾನಾ ಮಜಲುಗಳಲ್ಲಿ ಗುರುತಿಸಿಕೊಂಡಿದ್ದ ರವಿಬೆಳೆಗೆರೆಯವರ ಹೆಜ್ಜೆ ಗುರುತುಗಳು ಬಣ್ಣದ ಲೋಕದಲ್ಲೂ ಮೂಡಿವೆ. ಸಿನಿಮಾಲೋಕ ಹಾಗೂ ಸಿನಿಮಂದಿ ಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ರವಿಬೆಳೆಗೆರೆ ಅವರು ರವಿಶ್ರೀವಾತ್ಸ ನಿರ್ದೇಶನದ ಗಂಡ ಹೆಂಡತಿ ಚಿತ್ರದಲ್ಲಿ ತನಿಖಾಧಿಕಾರಿಯಾಗಿ ಗಮನ ಸೆಳೆದರು. ನಂತರ ಗುರುದೇಶಪಾಂಡೆ ನಿರ್ದೇಶಿಸಿದ್ದ ವಾರಸ್ದಾರ, ಶಿವರಾಜ್ಕುಮಾರ್ ಅಭಿನಯದ ಮಾದೇಶ, ಡೆಡ್ಲಿ ಸೋಮ ಚಿತ್ರಗಳಲ್ಲೂ ತಮ್ಮ ಅಭಿನಯದ ಮಿಂಚು ಹರಿಸಿದ್ದರು.
ಡೆಡ್ಲಿ ಸೋಮ ಸಿನಿಮಾಕ್ಕೆ ರವಿಬೆಳೆಗೆರೆ ಯವರು ಹಿನ್ನೆಲೆ ಧ್ವನಿ ನೀಡಿದ್ದರು. ಚಿತ್ರರಂಗ ದಲ್ಲಿ ರವಿಬೆಳೆಗೆರೆಯವರಿಗೆ ಮಿಂಚುವ ಎಲ್ಲಾ ಅವಕಾಶಗಳು ಇದ್ದರೂ ಕೂಡ ಭೂಗತಲೋಕದ ಹಿನ್ನೆಲೆ ಇರುವ ಪಾತ್ರಗಳಲ್ಲೇ ಹೆಚ್ಚಾಗಿ ಗಮನ ಹರಿಸಿಕೊಂಡು ಬಂದಿದ್ದರಿಂದ ಅವರು ನಟನೆಯಿಂದ ದೂರವೇ ಉಳಿದರಾದರೂ ಸಿನಿಮಾ ಲೋಕದ ಮಂದಿಯೊಂದಿಗಿನ ನಂಟನ್ನು ಕಳಚಿಕೊಂಡಿರಲಿಲ್ಲ.
ಕಿಚ್ಚ ಸುದೀಪ್ ಅವರು ನಿರೂಪಕರಾಗಿರುವ ಬಿಗ್ಬಾಸ್ ಸೀಸನ್ನಲ್ಲೂ ಗುರುತಿಸಿಕೊಂಡಿದ್ದ ರವಿಬೆಳೆಯವರ ಅಳಿಯ ಶ್ರೀನಗರ ಕಿಟ್ಟಿ ಕೂಡ ಸ್ಯಾಂಡಲ್ವುಡ್ನಲ್ಲಿ ನಟನಾಗಿ ಹಲವು ಚಿತ್ರಗಳಲ್ಲಿ ಮಿಂಚಿದ್ದಾರೆ. ರವಿಬೆಳೆಗೆರೆಯವರು ಬರೆದಿರುವ ಒಮರ್ಟಾ ಕಾದಂಬರಿಯನ್ನು ಸಿನಿಮಾವಾ ಗಿಸಲು ಗುಳ್ಟು ಚಿತ್ರದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಅವರು ಮುಂದಾಗಿದ್ದರು, ಇದಕ್ಕೆ ರವಿಬೆಳೆಗೆರೆಯವರು ಕೂಡಾ ಸಮ್ಮತಿಸಿದ್ದರು.
ಬೆಳ್ಳಿತೆರೆ ಅಲ್ಲದೆ ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ರವಿಬೆಳೆಗೆರೆಯವರು ಈಟಿವಿ ವಾಹಿನಿಗಾಗಿ ಕ್ರೈಂ ಡೈರಿ ಎಂಬ ಅಪರಾಧ ಹಿನ್ನೆಲೆಯನ್ನು ಬಿಂಬಿಸುವ ಕಾರ್ಯಕ್ರಮವೊಂದನ್ನು ನಿರ್ಮಿಸಿದ್ದರು. ಎದೆ ತುಂಬಿ ಹಾಡುವೆನು ಎಂಬ ಸಂಗೀತ ಕಾರ್ಯ ಕ್ರಮವನ್ನು ಕೂಡ ಅವರು ನಡೆಸಿಕೊಟ್ಟಿದ್ದರು.
ನೈಟ್ ಬಿಟ್ ಕ್ರೈಮ್, ತಮ್ಮದೇ ಕಾದಂಬರಿ ಆಧಾರಿಸಿದ್ದ ಹೇಳಿ ಹೋಗು ಕಾರಣ ಎಂಬ ಪ್ರೋಗ್ರಾಂಗಳನ್ನು ಕಿರುತೆರೆಗಾಗಿ ಮಾಡಿಕೊಟ್ಟಿದ್ದ ರವಿಬೆಳೆಗೆರೆಯವರು ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ ನಿರ್ದೇಶಿಸಿರುವ ಮುಕ್ತಾ ಮುಕ್ತಾ ಧಾರಾವಾಹಿಯಲ್ಲಿ ಜಡ್ಜ್ ಪಾತ್ರಧಾರಿಯಾಗಿಯೂ ಗಮನ ಸೆಳೆದಿದ್ದರು.