ಹಾಯ್ ರವಿ” ಬೈ!
” ಹಾಯ್” ರವಿ ಬೆಳೆಗೆರೆ ಹೋಗಿ
ಬಿಟ್ಟ” ಎಂದು ಇಂದು ಬೆಳಿಗ್ಯೆ 6 ಗಂಟೆಗೆ
ಇನ್ನೂ ಹಾಸಿಗೆಯಲ್ಲಿದ್ದಾಗಲೇ ಫೋನ್ ಮಾಡಿ ತಿಳಿಸಿದವರು ಖ್ಯಾತ ಛಾಯಾಗ್ರಾಹಕ ಎಮ್.ಬಿ.ಗೌಡರು.ಸಹಜವಾಗಿ ರವಿಯ ಪ್ಲಸ್ , ಮೈನಸ್ ವಿನಿಮಯವಾಯಿತು.
ಎಮ್.ಬಿ.ಗೌಡರು ರವಿಯ ಕ್ಲಾಸ್ ಮೇಟ್, ರೂಮ್ ನೇಟ್.ಧಾರವಾಡದ ಕರ್ನಾಟಕ ವಿವಿ ಯಲ್ಲಿ ಕಲಿತವರು.ಒಂದೇ ರೂಮಿನಲ್ಲಿದ್ದವರು.
ರವಿ ಮತ್ತು ನಾನು ಮೊದಲು ಭೆಟ್ಟಿಯಾಗಿದ್ದು 1985 ರಲ್ಲಿ.ರಾಜಾಜಿನಗರದ ” ಅಭಿಮಾನ” ದಿನಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು ರವಿ.ಆಮೇಲೆ ಅವರು ನೂರಾ ಎಂಟು ಹಾದಿಗಳಲ್ಲಿ ಸಾಗಿದ್ದು ಎಲ್ಲರಿಗೂ ಗೊತ್ತು.ತಮ್ಮ ಬಗ್ಗೆ ಬರೆದುಕೊಂಡದ್ದು, ಟಿವಿ ಗಳಲ್ಲಿ ಮುಕ್ತವಾಗಿ ಹಂಚಿಕೊಂಡದ್ದು ಎಲ್ಲರಿಗೂ ತಿಳಿದೇ ಇದೆ.
ಕೆಲವು ವರ್ಷಗಳ ಹಿಂದೆ ಒಂದು ಪ್ರಕರಣದಲ್ಲಿ ಸಿಲುಕಿಕೊಂಡಾಗ ಹುಬ್ಬಳ್ಳಿಯಿಂದ ಫೋನ್ ಮಾಡಿದ್ದರು.ನಾನು ” ರಿ” ಹಚ್ಚಿ ಬಹುವಚನದಿಂದ ಮಾತನಾಡಿದಾಗ ರವಿಗೆ ಸಿಟ್ಟು ಬಂತು.” ಏನಪಾ ಇದೇನು ಹೊಸಾದ ಚಾಲು ಮಾಡಿದಿ” ಎಂದರು.
” ನೀನು ನನ್ನ ಓ ಮನಸೆ ಮ್ಯಾಗ್ಝಿನ್ ಗೆ ರೆಗ್ಯುಲರ್ ಆಗಿ ಬರೆಯಬೇಕು.ನಿನ್ನ ಬರಹ ಏನೆಂಬುದು ನನಗೆ ಗೊತ್ತು” ಎಂದರು ರವಿ.
ನಾನು ರೆಗ್ಯುಲರ್ ಆಗಿ ಬರೆಯುವದು ಕಷ್ಟ.ಯಾವಾಗಲಾದರೂ ಒಮ್ಮೊಮ್ಮೆ ಬರೆದು ಕಳಿಸಬಹುದು” ಎಂದೆ.ಮತ್ತಷ್ಟು ಕೆರಳಿದ ರವಿ ” ನೀನೊಬ್ಬ ಅಹಂಕಾರಿ” ಎಂದವರೇ ಫೋನ್ ಕಟ್ ಮಾಡಿ ಬಿಟ್ಟರು!
ರವಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿದಾಗ ಬೆಳಗಾವಿಯ ಪತ್ರಕರ್ತ ಗೆಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದೆವು.ಕಪ್ಪು ಫಲಕ ಹಿಡಿದು ನಮ್ಮ ಸಾತ್ವಿಕ ಆಕ್ರೋಶವನ್ನು ದಾಖಲಿಸಿದ್ದೆವು.
ಎರಡು ದಶಕಗಳ ಹಿಂದೆ ಧಾರವಾಡದ ಪತ್ರಕರ್ತ ಗೆಳೆಯ ರವಿ ಕುಲಕರ್ಣಿ ಅವರ ಮದುವೆಗೆ ಹೋಗಿದ್ದೆ.ಅಲ್ಲಿ ಬೆಳೆಗೆರೆಗೆ ಎದುರು ಬದುರಾಗಿ ಸಿಕ್ಕೆ.” ನೀನು ಆಗಾಗ ಬೆಂಗಳೂರಿಗೆ ಬಂದು ಹೋಗುವದು ನನಗೆ ಗೊತ್ತು.ಆದರೆ ನನ್ನ ಆಫೀಸ್ ಗೆ ಒಮ್ಮೆಯೂ ಬಂದಿಲ್ಲ.ಹಾಗೆ ಮಾಡಬೇಡ” ಎಂದರು.ನಾನು ಹುಲಿಯ ಬಾಯಿಗೆ ಸಿಕ್ಕ ಮೇಕೆ ಮರಿಯಂತೆ ಬರ್ತೀನಿ, ಬರ್ತೀನಿ” ಎಂದು ಹೇಳಿ ಪಾರಾದೆ.
ನಿಜವಾಗಿಯೂ ರವಿಯ ಬೆಂಗಳೂರು ಕಚೇರಿಯನ್ನು ಇದುವರೆಗೂ ನೋಡಿಯೇ ಇಲ್ಲ.ಸುಮ್ಮನೇ ಏಕೆ ಉಸಾಬರಿ.ಅವನು ಬರೆಯಲೇ ಬೇಕು ಎಂದು ಪಟ್ಟು ಹಿಡಿದರೆ ನನಗೆ ಹಾಯ್ ಪತ್ರಿಕೆಗೆ ಬರೆಯುವದು ಸಾಧ್ಯವೇ ಇಲ್ಲ ಎಂದು ಅಂಜಿಯೇ ಹೋಗಲಿಲ್ಲ!
ಲಂಕೇಶ ಪತ್ರಿಕೆಯ ದಿನಗಳಿಂದಲೂರವಿ ಗೊತ್ತು.ಅವರ ಬರಹದ
ಹಾಗೂ ಸಾಗುವ ದಾರಿಯ ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ಇದ್ದೇ ಇವೆ.ಆದರೆ ಅವರು ಬರಹಗಳಿಗೆ ಲಕ್ಷಾಂತರ ಓದುಗರು ದೊಡ್ಡ ಸಂಖ್ಯೆಯೇ ಕರ್ನಾಟಕದಲ್ಲಿ ಸೃಷ್ಟಿಯಾಗಿತ್ತೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ರವಿಯ ಆತ್ಮಕ್ಕೆ ಚಿರಶಾಂತಿ
ಸಿಗಲಿ.
ಅಶೋಕ ಚಂದರಗಿ
ಪತ್ರಕರ್ತರು, ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ, ಬೆಳಗಾವಿ
ಮೊ:9620114466