ಬೆಂಗಳೂರು,ನ.4- ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತರಲು ತೀರ್ಮಾನಿಸಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡಲು ಕೆಲವು ಶಕ್ತಿಗಳು ಸಂಘಟಿತವಾಗಿ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ಜಾರಿ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.
ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ವಾದರೆ ಕಾನೂನಿನ ಮಾನ್ಯತೆ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಅಲ್ಲದೆ ಲವ್ ಜಿಹಾದ್ಗಾಗಿ ಪರಿವರ್ತನೆಯಾಗುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಆರಂಭವಾಗಿದೆ ಎಂದರು. ದೇಶಾದ್ಯಂತ ಈಗಾಗಲೇ ವ್ಯಾಪಕವಾದ ಚರ್ಚೆ ಆರಂಭವಾಗಿದೆ. ಈಗಿರುವ ಕಾನೂನಿಗೆ ತಿದ್ದುಪಡಿ ಮಾಡಬೇಕೆ? ಇಲ್ಲವೇ ಹೊಸ ಕಾನೂನು ಜಾರಿ ಮಾಡಬೇಕೆ ಎಂಬ ಚಿಂತನೆಯೂ ಕೂಡ ನಡೆದಿದೆ ಎಂದು ಹೇಳಿದರು.
ಕೆಲವು ರಾಜ್ಯಗಳು ಈಗಾಗಲೇ ಲವ್ ಜಿಹಾದ್ ತಡೆಯಲು ಹೊಸ ಕಾನೂನು ಜಾರಿ ಮಾಡುವುದಾಗಿ ಘೋಷಣೆ ಮಾಡಿವೆ. ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ರಚನೆಯಾಗ ಬೇಕೆಂಬುದು ನಮ್ಮ ಸರ್ಕಾರದ ಚಿಂತನೆಯಾಗಿದೆ. ಬೇರೆ ರಾಜ್ಯಗಳಲ್ಲಿ ಯಾವ ಯಾವ ಕಾನೂನು ಗಳನ್ನು ಅಳವಡಿಸಿದ್ದಾರೆ ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಕಾನೂನು ತಜ್ಞರ ಜೊತೆಯೂ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರ ಲವ್ ಜಿಹಾದ್ ತಡೆಯಲು ಯಾವ ಯಾವ ನಿಯಮಗಳನ್ನು ಜಾರಿಗೆ ತರುತ್ತಿವೆ ಎಂಬ ಬಗ್ಗೆ ನಾವು ಕೂಡ ಅವಲೋಕನ ಮಾಡುತ್ತಿದ್ದೇವೆ.ಪ್ರತಿ ಪ್ರಕರಣಗಳು ನಡೆದಾಗ ಈ ವಿಷಯ ಚರ್ಚೆಗೆ ಬರುತ್ತದೆ. ಈಗ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದ ಬಳಿಕ ಕಾನೂನು ಜಾರಿ ಮಾಡಬೇಕೆಂಬ ಚಿಂತನೆ ಆರಂಭವಾಗಿದೆ. ಬೇರೆ ರಾಜ್ಯಗಳಲ್ಲಿನ ಕಾನೂನುಗಳನ್ನು ಅಧ್ಯಯನ ಮಾಡಿ ನಮ್ಮ ಸರ್ಕಾರ ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಎಲ್ಲರ ಸಲಹೆಸೂಚನೆಗಳನ್ನು ಪಡೆದು ಲವ್ ಜಿಹಾದ್ ತಡೆಗೆ ಕಾನೂನು ಜಾರಿ ಮಾಡಲಿದ್ದೇವೆ. ದೇಶಾದ್ಯಂತ ಕಳೆದ ಎಂಟತ್ತು ವರ್ಷಗಳಿಂದಲೂ ಇದು ಚರ್ಚೆಗೆ ಬರುತ್ತಲೇ ಇದೆ. ಕೆಲವರು ಹೊಸ ಕಾನೂನು ಜಾರಿ ಮಾಡಬೇಕೆಂದು ಸಲಹೆ ನೀಡಿದರೆ, ಇನ್ನು ಕೆಲವರು ಈಗಿರುವ ಕಾನೂನಿಗೆ ತಿದ್ದುಪಡಿ ಮಾಡಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಎಲ್ಲಾ ಸಾಧಕಬಾಧಕಗಳನ್ನು ಚರ್ಚಿಸಿ ಸರ್ಕಾರ ಆದಷ್ಟು ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.