ಬೆಂಗಳೂರು: ರಾಜ್ಯ ಸರ್ಕಾರ ಭಾರತ ಕ್ರಿಕೆಟ್ ತಂಡದ ಆಟಗಾರ, ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ಗೆ ಏಕಲವ್ಯ ಪ್ರಶಸ್ತಿಯನ್ನು ನೀಡಿದ್ದು, ಇದಕ್ಕೆ ಕೆ.ಎಲ್.ರಾಹುಲ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ನಲ್ಲಿ ಅವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿದೆ. ಇದಕ್ಕೆ ಕೆ.ಎಲ್.ರಾಹುಲ್ ಭಾವನಾತ್ಮಕ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.
ಪ್ರಶಸ್ತಿ ಕುರಿತು ಟ್ವೀಟ್ ಮಾಡಿರುವ ಅವರು, ನನಗೆ ಏಕಲವ್ಯ ಪ್ರಶಸ್ತಿ ಕೊಡಮಾಡಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು. ಕೋಚ್, ತಂಡದ ಆಟಗಾರರು, ಸ್ನೇಹಿತರು ಹಾಗೂ ಕುಟುಂಬದವರ ಸಹಕಾರವಿಲ್ಲದೆ ಈ ಸಾಧನೆ ಮಾಡಲು ಸಾಧ್ಯವಿಲ್ಲ. ನಾನು ಇನ್ನೂ ಕಠಿಣ ಪರಿಶ್ರಮದ ಮೂಲಕ ಆಟವಾಡುತ್ತೇನೆ. ಈ ಮೂಲಕ ನಮ್ಮ ರಾಜ್ಯ ಹಾಗೂ ದೇಶ ಹೆಮ್ಮೆ ಪಡುವಂತೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿಯನ್ನು ಸ್ವೀಕರಿಸಲು ತುಂಬಾ ಹೆಮ್ಮೆಯೆನಿಸುತ್ತಿದೆ. ಈ ಗೌರವವನ್ನು ನೀಡಿದ ಕರ್ನಾಟಕ ಸರಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ಮತ್ತೊಮ್ಮೆ ಧನ್ಯವಾದಗಳು ಎಂದು ಕನ್ನಡದಲ್ಲಿ ರಾಹುಲ್ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕೆ ಕೆ.ಎಲ್ ರಾಹುಲ್ ಅವರಿಗೆ ರಾಜ್ಯ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡಿದೆ. ಇವರ ಜೊತೆಗೆ ಪಂಜಾಬ್ ತಂಡದ ಆಟಗಾರ ಮಾಯಾಂಕ್ ಅಗರ್ವಾಲ್ ಅವರಿಗೂ ಪ್ರಶಸ್ತಿ ಲಭಿಸಿದೆ. ಐಪಿಎಲ್ 2020ರ ಆವೃತ್ತಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿ ಕೆ.ಎಲ್.ರಾಹುಲ್ ಅವರಿಗೆ ಸಲ್ಲುತ್ತದೆ. ಈ ಸೀಸನ್ನಲ್ಲಿ ಅವರು ಒಟ್ಟು 14 ಪಂದ್ಯಗಳನ್ನು ಆಡಿ, 670 ರನ್ಗಳನ್ನು ಸಿಡಿಸಿದ್ದಾರೆ.