ಗದಗ: ರಸ್ತೆ ಪಕ್ಕದ ಒಣ ಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ದಟ್ಟವಾದ ಹೊಗೆಯಲ್ಲಿ ದಾರಿ ಕಾಣದೆ ಬೈಕ್ ಸವಾರ ಸೇರಿ ಕುಟುಂಬದ ಮೂವರು ಬೆಂಕಿನಲ್ಲಿ ಬಿದ್ದ ಘಟನೆ ಜಿಲ್ಲೆಯ ರೋಣ ಪಟ್ಟಣದ ಬಳಿ ನಡೆದಿದೆ.
ರೋಣ ಹಾಗೂ ಜಕ್ಕಲಿ ನಡುವೆ ಘಟನೆ ಸಂಭವಿಸಿದೆ. ಬೆಂಕಿ ದುರಂತದಲ್ಲಿ ಬೈಕ್ ಸವಾರ, ಹಿಂಬದಿ ಕುಳಿತ ತಾಯಿ ಮಗುವಿಗೆ ಗಂಭೀರ ಗಾಯಗಳಾಗಿವೆ. ಬೈಕ್ ಸವಾರ 29 ವರ್ಷದ ನಾಗರಾಜ್ ರ್ಯಾವಣಕಿ, 2 ವರ್ಷದ ಮಗು ಲಲಿತಾ ಹಾಗೂ ತಾಯಿ ಅಕ್ಕಮ್ಮ ಅವರಿಗೆ ಗಾಯಗಳಾಗಿವೆ. ಬೈಕ್ ಸುಟ್ಟು ಸಂಪೂರ್ಣ ಕರಕಲಾಗಿದೆ.
ರಸ್ತೆ ಪಕ್ಕದಲ್ಲಿನ ಹುಲ್ಲಿಗೆ ಯಾರೋ ಬೆಂಕಿ ಹಚ್ಚಿದ್ದರಿಂದ ರಸ್ತೆ ತುಂಬೆಲ್ಲಾ ಹೊಗೆ ಆವರಿಸಿದೆ. ಹೊಗೆಯಲ್ಲೆ ಬೈಕ್ ಮೇಲೆ ಸಂಚಾರ ಮಾಡುವ ವೇಳೆ ರಸ್ತೆ ಕಾಣದೆ ರಸ್ತೆ ಪಕ್ಕ ಬೆಂಕಿನಲ್ಲಿ ಬಿದ್ದಿದ್ದಾರೆ. ಕೂಡಲೆ ಸ್ಥಳಿಯರು ದೌಡಾಯಿಸಿ ಈ ಮೂವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಧಾವಿಸಿ ಬೆಂಕಿ ನಂದಿಸಿದ್ದಾರೆ.
ಗಾಯಗೊಂಡ ಬೈಕ್ ಸವಾರ, ಮಗು, ತಾಯಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಕರೆತಂದರೂ ಸಿಬ್ಬಂದಿ ಬೇಗ ಬಾರದ ಹಿನ್ನಲೆ ಅಂಬುಲೆನ್ಸ್ ನಲ್ಲೇ 15 ನಿಮಿಷ ಮಗು, ತಾಯಿ ನರಳಾಡಬೇಕಾಯಿತು. ನಂತರ ಸಂಬಂಧಿಕರೇ ತುರ್ತು ಚಿಕಿತ್ಸಾ ಘಟಕ್ಕೆ ಮಗುವನ್ನು ಎತ್ತಿಕೊಂಡು ಹೋಗಿ ನಂತರ ತಾಯಿಯನ್ನು ಸ್ಟ್ರೇಚ್ಚರ್ ನಲ್ಲಿ ಶಿಫ್ಟ್ ಮಾಡಿದರು ಎಂದು ಗಾಯಾಳು ಕುಟುಂಬದವರು ಆರೋಪಿಸಿದ್ದಾರೆ. ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.