ಇಸುವಾ(ಬಿಹಾರ),ಅ.23- ಅತ್ತ ಎನ್ಡಿಎ ಪರವಾಗಿ ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಚುನಾವಣೆಗಾಗಿ ಪಾಂಚಜನ್ಯ ಮೊಳಗಿಸಿದ್ದರೆ, ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರ್ಜೆಡಿ ನೇತೃತ್ವದ ಮೈತ್ರಿಕೂಟಕ್ಕಾಗಿ ರಣಕಹಳೆ ಊದಿದ್ದಾರೆ. ಇಸುವಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಲಡಾಕ್ನಲ್ಲಿ ಚೀನಿ ಸೈನಿಕರು ಗಡಿಯೊಳಗೆ ನುಸುಳಿ ಹಿಂಸಾಚಾರ ನಡೆಸಿದ್ದರೂ ಯಾರೂ ಅತಿಕ್ರಮಣ ಮಾಡಿಲ್ಲ ಎಂದು ಸುಳ್ಳು ಹೇಳಿ ಭಾರತೀಯ ಯೋಧರಿಗೆ ಅಪಮಾನ ಮಾಡಿದ್ದಾರೆ ಎಂದು ಟೀಕಿಸಿದರು.
ಕೋವಿಡ್ ವೈರಸ್ ಪಿಡುಗಿನ ವೇಳೆ ತೀವ್ರ ಸಂಕಷ್ಟಕ್ಕೆ ಒಳಗಾದ ಬಿಹಾರದ ವಲಸೆ ಕಾರ್ಮಿಕರನ್ನು ಅನೇಕ ರಾಜ್ಯಗಳು ಹೊರಗಟ್ಟಿದಾಗ ನಿರಾಶ್ರಿತರಿಗೆ ಮೋದಿ ಸರ್ಕಾರ ಆಶ್ರಯ ನೀಡಿಲ್ಲ. ಈಗ ಮತ ಕೇಳಲು ಪ್ರಧಾನಿಯವರು ರ್ಯಾಲಿ ನಡೆಸುತ್ತಿದ್ದಾರೆ ಎಂದು ಛೇಡಿಸಿದರು.