ಬೆಂಗಳೂರು,ಅ.23- ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂಪರ್ಕದಲ್ಲಿರುವ ಗಣ್ಯರು ಮತ್ತು ಸರ್ಕಾರಿ ಅಧಿಕಾರಿಗಳ ಮತ್ತೊಂದು ಸಾಮಾಜಿಕ ಜಾಲತಾಣ ಖಾತೆಯಿಂದ ಮಿತೃತ್ವ ಮನವಿ(ಫ್ರೆಂಡ್ ರಿಕ್ವೆಸ್ಟ್) ಬಂದಲ್ಲಿ ಅವುಗಳನ್ನು ಸ್ವೀಕರಿಸುವ ಮುಂಚೆ ಜಾಗೃತಿ ವಹಿಸಿ ವಂಚನೆಗಳಿಗೆ ಬಲಿಯಾಗದಂತೆ ಸಾರ್ವಜನಿಕರು ಎಚ್ಚರವಹಿಸಬೇಕೆಂದು ಪೊಲೀಸರು ಸೂಚಿಸಿದ್ದಾರೆ.
ನಿಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿನ ಮಾಹಿತಿಗಳು ದುರುಪಯೋಗವಾಗದಂತೆ ನಿಯಂತ್ರಿಸಲು ಅಂತಹ ಜಾಲತಾಣಗಳಲ್ಲಿ ಒದಗಿಸಿರುವ ಖಾಸಗಿ ಸುರಕ್ಷತಾ ಆಯ್ಕೆಗಳನ್ನ ಸಕ್ರಿಯಗೊಳಿಸಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಹಾಗೂ ಇಂತಹ ಪ್ರಕರಣಗಳಲ್ಲಿ ಹಣಕ್ಕಾಗಿ ಕೋರಿಕೆ ಬಂದಲ್ಲಿ ಕೂಡಲೇ ಸಿಐಡಿ ಸೈಬರ್ ಅಪರಾಧ ವಿಭಾಗದ ದೂರವಾಣಿ ಸಂಖ್ಯೆ 080-22044601ಗೆ ಮಾಹಿತಿ ನೀಡಲು ಕೋರಲಾಗಿದೆ.
ಇತ್ತೀಚೆಗೆ ರಾಜ್ಯದಲ್ಲಿ ಸಾಮಾಜಿಕ ಜಾಲತಾಣದ ಸಂಪರ್ಕದಲ್ಲಿರುವವರಿಗೆ ತಮ್ಮ ಸೋಗಿನಲ್ಲಿ ಸ್ನೇಹ ಅಂಗೀಕರಿಸಲು ಕೋರಿಕೆ ಸಲ್ಲಿಸಿ, ತದನಂತರ ಅದನ್ನು ಸ್ವೀಕರಿಸಿದ ವ್ಯಕ್ತಿಗಳೊಂದಿಗೆ ಸಂಬಂಧಪಟ್ಟ ಗಣ್ಯರು ಮತ್ತು ಅಧಿಕಾರಿಗಳ ಸೋಗಿನಲ್ಲಿ ಸಂಹವನ ನಡೆಸಿ ತುರ್ತು ಕಾರಣಗಳು ಇರುವುದಾಗಿ ನಂಬಿಸಿ ಅವರಿಂದ ಹಣ ಪಡೆದು ವಂಚಿಸುತ್ತಿರುವುದು ಕಂಡುಬಂದಿದೆ. ನಕಲಿ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಗೆಳೆತನಕ್ಕಾಗಿ ಕೋರಿಕೆ ಸಲ್ಲಿಸಿ ನಂತರ ಅವರ ಮನವೊಲಿಸಿ ಹಣ ಲಪಟಾಯಿಸುತ್ತಿದ್ದ ಪ್ರಕರಣದಲ್ಲಿ ಈಗಗಲೇ ನಾಲ್ವರನ್ನು ಸಿಐಡಿ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಗಳು ನಕಲಿ ಸಿಮ್ ಕಾರ್ಡ್ಗಳನ್ನು ಬಳಸಿಕೊಂಡು ನಕಲಿ ಸಾಮಾಜಿಕ ಜಾಲತಾಣಗಳನ್ನು ಸೃಷ್ಟಿಸುವುದಲ್ಲದೆ ಆನ್ಲೈನ್ ಮರು ಮಾರಟ ಜಾಲತಾಣಗಳಲ್ಲಿ ನಕಲಿ ಜಾಹಿರಾತು ನೀಡಲು, ವಂಚನೆ ಮಾಡುವ ಸಲುವಾಗಿ ಇ-ವ್ಯಾಲೆಟ್ಗಳು ಮತ್ತು ಪೇಮೆಂಟ್ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸುವುದೂ ಸೇರಿದಂತೆ ದೇಶಾದ್ಯಂತ ಸೈಬರ್ ಅಪರಾಧಗಳು ಮತ್ತು ಆನ್ಲೈನ್ ಹಣಕಾಸು ವಂಚನೆಗಳನ್ನು ಎಸಗಲು ಉಪಯೋಗಿಸುತ್ತಿದ್ದುದು ಕಂಡುಬಂದಿದೆ.