ಬೆಂಗಳೂರು: ಬಿಜೆಪಿ ಅಧ್ಯಕ್ಷರು ಯಾರೋ ಬಂಡೆಯನ್ನ ಡೈನಾಮಿಟ್ ಇಟ್ಟು ಪುಡಿ ಪುಡಿ ಮಾಡುತ್ತೇನೆ ಎಂದಿದ್ದಾರೆ. ನಾನೇನು ಬಂಡೆ, ಕನಕಪುರ ಬಂಡೆ ಅಂತ ಹೆಸರು ಇಟ್ಕೊಂಡಿಲ್ಲ. ಬಂಡೆ ಎಂಬುದು ಪ್ರಕೃತಿ. ಅದನ್ನು ಕಡೆದರೆ ಆಕೃತಿ, ಪೂಜಿಸುವುದು ಸಂಸ್ಕೃತಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ಮಾತನಾಡಿದರೆ, ಬಿಜೆಪಿ ನಾಕರುಗೆ ಪ್ರಮೋಷನ್ ಸಿಗುತ್ತದೆ ಎನ್ನಿಸುತ್ತದೆ. ಅದಕ್ಕಾಗಿ ಚುನಾವಣಾ ಸಮಯದಲ್ಲಿ ಅಶ್ವತ್ಥ ನಾರಾಯಣ್ ಸಾಹೇಬ್ರು, ಅಶೋಕಣ್ಣ ಮತ್ತು ಸಿಟಿ ರವಿ ನನ್ನ ಬಗ್ಗೆ ಬಹಳ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನನ್ನನ್ನು ಜನರು ಪ್ರೀತಿಯಿಂದ ಬಂಡೆ ಎಂದು ಕರೆಯುತ್ತಾರೆ. ಅದಕ್ಕೆ ಸಂತೋಷವಿದೆ. ಬಂಡೆಯಾಗಿ ನಾನು ವಿಧಾನ ಸೌಧಕ್ಕೆ ಚಪ್ಪಡಿಯಾದರೆ, ಜನ ನಡೆದುಕೊಂಡು ಹೋಗಲು ಆಗುತ್ತದೆ. ಡೈನಾಮಿಟ್ ಇಟ್ಟು ಪುಡಿ ಮಾಡಿದರೆ ಜಲ್ಲಿ ಕಲ್ಲು ಆಗಿ, ಅಡಿಪಾಯಕ್ಕೆ ಉಪಯೋಗಕ್ಕೆ ಬರುತ್ತದೆ. ಈ ಕಲ್ಲು ಬಂಡೆ, ಜಲ್ಲಿಯಾಗಿ, ಇಟ್ಟಿಗೆಯಾಗಿ ಎಲ್ಲಾ ರೀತಿಯಲ್ಲೂ ಉಪಯೋಗವಾಗುತ್ತದೆ ಎಂದರು.
ಆರ್ಆರ್ ನಗರದ ನಮ್ಮ ಅಭ್ಯರ್ಥಿ ಕುಸುಮಾ ದಿ.ಐಎಎಸ್ ಅಧಿಕಾರಿ, ಡಿಕೆ ರವಿ ಅವರನ್ನು ಅಗ್ನಿ ಸಾಕ್ಷಿಯಾಗಿ, ಸಪ್ತಪದಿ ತುಳಿದು, ಎಲ್ಲರ ಸಾಕ್ಷಿಯಾಗಿ ಮದುವೆ ಆಗಿದ್ದಾರೆ. ಆದರೆ, ಅಕ್ಕ, ನಮ್ಮಕ್ಕ ಶೋಭಕ್ಕ ಗಂಡನ ಹೆಸರು ಬಳಸಬಾರದು ಅಂತಾರೆ ಹೆಂಗೆ? ಅವರು ಹೆಸರು ಬಳಸಬಾರದು ಅಂತ್ಯಾಕೆ ಹೇಳಬೇಕು ಎಂದು ಪ್ರಶ್ನಿಸಿದರು.