ಬೆಂಗಳೂರು: ಮತಬೇಟೆಗೆ ಕೈಗೊಂಡ ಜಂಟಿ ‘ಪ್ರಜಾಧ್ವನಿ’ ಯಾತ್ರೆ ಮುಗಿಯುತ್ತಿದ್ದಂತೆ, ಇದೀಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪ್ರತ್ಯೇಕ ಯಾತ್ರೆಯ ವೇಳಾಪಟ್ಟಿ ಸಿದ್ಧವಾಗಿದೆ ಪಕ್ಷದ ಪ್ರಮುಖ ನಾಯಕರನ್ನು ಜೊತೆಗೆ ಕರೆದುಕೊಂಡು ಉತ್ತರ- ದಕ್ಷಿಣ ಭಾಗದಿಂದ ಇಬ್ಬರೂ ಫೆಬ್ರುವರಿ 3ರಿಂದ ಕ್ಷೇತ್ರವಾರು ‘ದಂಡಯಾತ್ರೆ’ ಹೊರಡಲಿದ್ದಾರೆ.
ಪಕ್ಷದ 35 ನಾಯಕರು ಮತ್ತು ಆಪ್ತ ಬಳಗದ ಜೊತೆ ಬೀದರ್ನ ಬಸವಕಲ್ಯಾಣದಿಂದ ಸಿದ್ದರಾಮಯ್ಯ ಯಾತ್ರೆ ಆರಂಭಿಸಲಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಮುಖಂಡರಾದ ಜಮೀರ್ ಅಹಮ್ಮದ್, ಬೈರತಿ ಸುರೇಶ್,ಎಚ್.ಸಿ. ಮಹಾದೇವಪ್ಪ, ಸಂತೋಷ್ ಲಾಡ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಉಮಾಶ್ರೀ, ಅಂಜಲಿ ನಿಂಬಾಳ್ಕರ್ ಮುಂತಾದವರು ಸಿದ್ದರಾಮಯ್ಯ ಜೊತೆ ಯಾತ್ರೆಯಲ್ಲಿ ಇರಲಿದ್ದಾರೆ.
ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಿ ಯಾತ್ರೆ ಆರಂಭಿಸಲಿರುವ ಸಿದ್ದರಾಮಯ್ಯ, ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದೇ ದಿನ ಬಾಲ್ಕಿಯಲ್ಲಿ, ಫೆ. 4ರಂದು ಔರಾದ್, ಬೀದರ್, ಬೀದರ್ ದಕ್ಷಿಣ ಕ್ಷೇತ್ರ, ಹುಮನಾಬಾದ್ನಲ್ಲಿ ಸಮಾವೇಶದಲ್ಲಿ ಮಾತನಾಡಿ ಕಲಬುರಗಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಫೆ. 6 ರಂದು ಗುಲಬರ್ಗಾ ಗ್ರಾಮೀಣ, ಚಿಂಚೋಳಿ, ಸೇಡಂ, 7ರಂದು ಆಳಂದ, ಅಫ್ಜಲಪುರ, ಯಡ್ರಾಮಿ ಜೇವರ್ಗಿ, 8ರಂದು ಚಿತ್ತಾಪುರ, 10ರಂದು ಸುರಪೂರ, ಶಹಾಪುರ, ಕಲಬುರ್ಗಿ ಉತ್ತರ ಹಾಗೂ ದಕ್ಷಿಣ, 11ರಂದು ಸಿಂಧಗಿ, ಇಂಡಿ, ನಾಗಠಾಣಾ, 12ರಂದು ಬಬಲೇಶ್ವರ, ದೇವರ ಹಿಪ್ಪರಗಿ, ಬಸವನ
ಬಾಗೇವಾಡಿ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಸಂಚರಿಸಲಿದ್ದಾರೆ.