ದಾವಣಗೆರೆ: ಕೋವಿಡ್ ಹಾಗೂ ನಾನ್ ಕೋವಿಡ್ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಮೃತರಾದರೆ, ಅವರ ಮೃತದೇಹವನ್ನು ನೀಡಲು ಸಂಬಂಧಿಕರಿಂದ ಹಣದ ಬೇಡಿಕೆ ಇಟ್ಟಿರುವ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮೃತದೇಹವನ್ನು ನೀಡಲು ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು ಹಾಗೂ ಕೆಲವು ಖಾಸಗಿ ವ್ಯಕ್ತಿಗಳು, ಕುಟುಂಬಸ್ಥರಿಗೆ ಹಣದ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜೊತೆಗೆ ನಾನ್ ಕೋವಿಡ್ ರೋಗಿಗಳು ಆಸ್ಪತ್ರೆಯಲ್ಲಿ ಮೃತರಾದರೆ ಅಥವಾ ಮನೆಯಲ್ಲಿ ಮೃತರಾದರೆ ಅವರ ಮೃತದೇಹವನ್ನು ಮನೆಯಿಂದ ಆಸ್ಪತ್ರೆಯ ಶವಾಗಾರಕ್ಕೆ ಹಾಗೂ ಶವಗಾರದಿಂದ ಸ್ಮಶಾನಕ್ಕೆ ಸಾಗಿಸಲು ನಾಲ್ಕರಿಂದ ಐದು ಸಾವಿರ ರೂಪಾಯಿಗಳನ್ನು ಲಂಚ ಪಡೆಯುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಅಲ್ಲದೆ ನಿನ್ನೆ ನೇಣಿಗೆ ಶರಣಾದ ನಟ ವಿಷ್ಣುವರ್ಧನ್ ಅಭಿಮಾನಿ ಲೋಕೇಶ್ ಅವರ ಮೃತದೇಹ ಸಾಗಿಸಲು ಸಹ ಆಸ್ಪತ್ರೆಯ ಸಿಬ್ಬಂದಿ ಹಣ ಕೇಳಿದ್ದರು ಎಂದು ಲೋಕೇಶ್ ಸಂಬಂಧಿಕರು ಆರೋಪಿಸಿದ್ದಾರೆ.