ಡಿಸೆಂಬರ್ 19ರೊಳಗಾಗಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಂಬಂಧ ಮುಖ್ಯಮಂತ್ರಿಗಳು ಶಾಶ್ವತ ಹಿಂದುಳಿದ ಆಯೋಗದಿಂದ ವರದಿ ಪಡೆದುಕೊಳ್ಳಬೇಕು. ಇಲ್ಲದಿದ್ರೆ ಡಿ.22ರಂದು ಸುವರ್ಣಸೌಧ ಮುಂದೆ 25 ಲಕ್ಷ ಪಂಚಮಸಾಲಿಗರನ್ನು ಸೇರಿ ವಿರಾಟ ಪಂಚ ಶಕ್ತಿ ಸಮಾವೇಶ ನಡಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಳಗಾವಿಯ ಗಾಂಧಿಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ 12ನೇ ತಾರೀಖು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟವನ್ನು ರದ್ದು ಮಾಡಿದ್ದೇವೆ. ಆದರೆ ಡಿಸೆಂಬರ್ 19ರಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನ ಪ್ರಾರಂಭವಾಗುತ್ತಿದೆ. ಇದರೊಳಗೆ ಕರ್ನಾಟಕ ಸರ್ಕಾರ ಕೊನೆಯ ಪಕ್ಷ ಶಾಶ್ವತ ಹಿಂದುಳಿದ ಆಯೋಗದಿಂದ ವರದಿಯನ್ನಾದರೂ ತರಿಸಿಕೊಳ್ಳಿ. ವರದಿ ಬರಲು ಒಂದು ವರ್ಷ ಅವಧಿ ತೆಗೆದುಕೊಂಡಿದ್ದಿರಿ.
ಡಿಸೆಂಬರ್ 12ರ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಿರುವ ಮಾಹಿತಿಯನ್ನು ತಿಳಿಸಿ ಸಿಎಂ ಬೊಮ್ಮಾಯಿ ಅವರಿಗೆ ಡಿಸೆಂಬರ್ 19ರ ಅಂತಿಮ ಗಡುವು ನೀಡಿದ್ದೇವೆ. ಅಷ್ಟರೊಳಗಾಗಿ ಶಾಶ್ವತ ಹಿಂದುಳಿದ ಆಯೋಗದ ವರದಿ ಪಡೆದುಕೊಂಡರೆ ನಾವು ಯಾವುದೇ ಕಾರಣಕ್ಕೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ಮಾಡುವುದಿಲ್ಲ. ಬದಲಾಗಿ ಅದೇ ಹೋರಾಟವನ್ನು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಮಾಡುವ ಬಗ್ಗೆ ವಿಚಾರ ಮಾಡಿದ್ದೇವೆ ಎಂದರು.
ಒಂದು ವೇಳೆ ಡಿ.19ರೊಳಗೆ ಸಿಎಂ ಬೊಮ್ಮಾಯಿ ಅವರು ಆಯೋಗದ ವರದಿಯನ್ನು ಪಡೆದುಕೊಳ್ಳದೇ ಹೋದರೆ ಅನಿವಾರ್ಯವಾಗಿ ಬೆಂಗಳೂರಿಗೆ ಹೋಗುವ ಹೋರಾಟವನ್ನು ಯೂಟರ್ನ ಮಾಡಿಕೊಂಡು ಡಿಸೆಂಬರ್ 22ರಂದು ಗುರುವಾರ ದಿವಸ ಸುವರ್ಣಸೌಧ ಮುಂದೆ 25 ಲಕ್ಷ ಪಂಚಮಸಾಲಿಗರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ ನಮ್ಮ ಅಂತಿಮವಾದ ಮಾಡು ಇಲ್ಲವೇ ಮೀಸಲಾತಿ ಪಡೆದು ಮಡಿ ಹೋರಾಟಕ್ಕೆ ಕರೆ ಕೊಟ್ಟಿದ್ದೇವೆ. ನಮ್ಮ ಹೋರಾಟದ ಸರ್ಕಾರದ ಬಿಸಿ ಸರ್ಕಾರಕ್ಕೆ ತಟ್ಟಿದ ಪರಿಣಾಮ 12ರಿಂದ 19ರೊಳಗೆ ಮಾಡಿ ಕೊಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಎಲ್ಲೋ ಒಂದು ಕಡೆ ಮುಖ್ಯಮಂತ್ರಿಗಳ ಮಾತಿನಲ್ಲಿ ಡಿ.19ರೊಳಗೆ ವರದಿ ಪಡೆದುಕೊಳ್ಳುವ ವಿಶ್ವಾಸವಿದೆ. 19ರೊಳಗೆ ವರದಿ ಪಡೆದುಕೊಂಡರೆ ಸನ್ಮಾನ ಮಾಡುತ್ತೇವೆ. ವರದಿ ಪಡೆದುಕೊಳ್ಳದಿದ್ರೆ ಡಿ.22ರಂದು ಸುವರ್ಣಸೌಧ ಮುಂದೆ ವಿರಾಟ ಪಂಚಶಕ್ತಿ ಸಮಾವೇಶ ಮಾಡುತ್ತೇವೆ ಎಂದು ಸಿಎಂ ಅವರಿಗೆ ಒತ್ತಡ ಹಾಕಿದ್ದೇವೆ ಎಂದು ಸ್ವಾಮೀಜಿ ಹೇಳಿದರು.