ಪಣಜಿ: ಗೋವಾದಲ್ಲಿ ಕನ್ನಡಿಗರ ಬಹು ವರ್ಷಗಳ ಕನಸು ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ದೊಡ್ಡ ಕನಸು. ಗೋವಾ ಸರ್ಕಾರದ ಬಳಿ ನಮ್ಮದು ಮನವಿಯಿದೆ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರವು ಈಗಾಗಲೇ ನಿಧಿಯನ್ನು ಕೂಡ ಮಂಜೂರು ಮಾಡಿದೆ.
ಆದರೆ ಇಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗದ ಅಗತ್ಯವಿದೆ. ಗೋವಾ ಸರ್ಕಾರವು ಕನ್ನಡ ಭವನ ನಿರ್ಮಾಣಕ್ಕೆ ಜಾಗ ಕಲ್ಪಿಸಿಕೊಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕ ಗೋವಾ, ದಕ್ಷಿಣ ಗೋವಾ ಜಿಲ್ಲಾ ಮತ್ತು ಸಾಲಸೇಟ ತಾಲೂಕಾ ಘಟಕದ ಪದಾಧಿಕಾರಿಗಳ ಪದಗೃಹಣ ಹಾಗೂ ನೂತನ ಸದಸ್ಯತ್ವ ಅಭಿಯಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಗೋವಾ ಮತ್ತು ಕರ್ನಾಟಕ ಈ ಎರಡೂ ರಾಜ್ಯಗಳ ಸಂಸ್ಕೃತಿ ಬಹುತೇಕ ಒಂದೇ ಆಗಿದೆ. ಹಲವು ಜನ ಕನ್ನಡಿಗರ ಕುಲದೇವರು ಗೋವಾದಲ್ಲಿದೆ. ಗೋವಾದ ಹಲವು ಜನರ ಕುಲದೇವರು ಕರ್ನಾಟಕದಲ್ಲಿದೆ. ಕನ್ನಡ ಭವನ ನಿರ್ಮಾಣಕ್ಕೆ ಗೋವಾ ಸರ್ಕಾರವು ಸೂಕ್ತ ಜಾಗ ಕಲ್ಪಿಸಿಕೊಡಬೇಕು. ಗೋವಾದಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ನೆಲೆಸಿದ್ದಾರೆ. ಇನ್ನು ಗೋವಾಕ್ಕೆ ಕೆಲಸಕ್ಕೆ ಬಂದು ಹೋಗುವವರನ್ನು ಸೇರಿಸಿದರೆ ಒಟ್ಟೂ ಸುಮಾರು 6 ಲಕ್ಷ ಜನ ಕನ್ನಡಿಗರು ಗೋವಾದಲ್ಲಿದ್ದಾರೆ. ಮೂಲ ಗೋವನ್ನರನ್ನು ಹೊರತುಪಡಿಸಿದರೆ ಗೋವಾದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವವರು ಕನ್ನಡಿಗರೇ ಆಗಿದ್ದಾರೆ ಎಂದು ನಾಡೋಜ ಡಾ. ಮಹೇಶ್ ಜೋಶಿ ನುಡಿದರು.
ಸಮಾರಂಭದ ಉಧ್ಘಾಟನೆ ನೆರವೇರಿಸಿದ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಬೆಳಗಾವಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ-ಗೋವಾ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕ ಉದ್ಘಾಟನೆಯ ಸಂದರ್ಭದಲ್ಲಿ ಒಂದು ಅಧ್ಬುತ ಬದಲಾವಣೆ ನಿರ್ಮಾಣವಾಯಿತು. ಕನ್ನಡ ಭವನ ಕಟ್ಟುವ ವಿಷಯ ಕುರಿತ ಅಂದಿನ ಹೇಳಿಕೆಯು ಇಡೀ ರಾಜ್ಯಾದ್ಯಂತ ಚರ್ಚೆಯಾಯಿತು. ನಾನು ಇಲ್ಲಿಗೆ ಬೇರೆ ಎಲ್ಲ ಕೆಲಸ ಬಿಟ್ಟು ಏಕೆ ಬರುತ್ತೇನೆ ಎಂದರೆ ನೀವು ನನಗೆ ಮುಖ್ಯವಲ್ಲ, ಕನ್ನಡ ನನಗೆ ಬಹಳ ಮುಖ್ಯ. ಕನ್ನಡದ ಉಳಿವಿಗಾಗಿ ನಾವೆಲ್ಲ ಶೃಮಿಸಬೇಕು ಎಂದು ಬೆಳಗಾವಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.