ಮಾನವ ಬಂಧುತ್ವ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಇಡೀ ರಾಜ್ಯಾಧ್ಯಂತ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಪರಿವರ್ತನೆ ಮಾಡಿ ಆಚರಿಸುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.
ಗೋಕಾಕ್ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ 12ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಮೌಢ್ಯತೆ ಆಚರಿಸುವುದು ಸರಿಯಲ್ಲ ಎಂದು ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ. ಆದರೆ ಇನ್ನು ಕೂಡ ಜನರು ಮೂಢನಂಬಿಕೆ, ಮೌಢ್ಯತೆಯಲ್ಲಿಯೇ ಮುಳುಗಿದ್ದಾರೆ. ಇದನ್ನು ಬದಲಾವಣೆ ಮಾಡಲು ಒಂದು ಪ್ರಯೋಗ ಮಾಡುತ್ತಿದ್ದೇವೆ.
ಪ್ರತಿ ವರ್ಷದಂತೆ ಇದೇ ಆಗಸ್ಟ್ 2ರಂದು ನಾಗರ ಪಂಚಮಿ ಬದಲು ಬಸವ ಪಂಚಮಿ ಆಚರಿಸುತ್ತಿದ್ದೇವೆ. ಪ್ರಗತಿಪರ ಚಿಂತಕರು, ಬಹಳಷ್ಟು ಮಠಾಧೀಶರು ತಮ್ಮ ಮಠಗಳಲ್ಲಿಯೂ ಕಳೆದ ವರ್ಷ ಬಸವ ಪಂಚಮಿ ಆಚರಿಸಿದ್ದಾರೆ. ಈ ವರ್ಷವೂ ಅವರು ಆಚರಿಸಬೇಕು ಎಂದು ಮನವಿ ಮಾಡಿಕೊಂಡರು.
ಇನ್ನು ಸಿದ್ದರಾಮಯ್ಯ ಅವರ 75ನೇ ಹುಟ್ಟು ಹಬ್ಬ ಅಮೃತ ಮಹೋತ್ಸವಕ್ಕೆ ಬಹಳ ಜೋರಾಗಿ ತಯಾರಿ ಮಾಡುತ್ತಿದ್ದೇವೆ. ಒಂದು ಐತಿಹಾಸಿಕ ದೊಡ್ಡ ಕಾರ್ಯಕ್ರಮ ಬಹಳ ದಿನಗಳ ಬಳಿಕ ದಾವಣಗೆರೆಯಲ್ಲಿ ನಡೆಯುತ್ತಿದೆ. ನಮ್ಮ ಜಿಲ್ಲೆಯಿಂದಲೂ ಕೂಡ ಸಾಕಷ್ಟು ಜನರು ಅದರಲ್ಲಿ ಭಾಗವಹಿಸಲಿದ್ದಾರೆ.
ಬಿಜೆಪಿಯವರಿಗೆ ಯಾವುದೇ ರೀತಿ ತಿರಂಗಾ ಧ್ವಜ ಹಾರಿಸುವ ಅಧಿಕಾರ ಇಲ್ಲ. ಯಾಕೆಂದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಒಂದೇ ಒಂದು ಉದಾಹರಣೆ ಇಲ್ಲ.
ಹೀಗಾಗಿ ಇದನ್ನು ಹೈಜಾಕ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸತೀಶ ಜಾರಕಿಹೊಳಿ ಕಿಡಿಕಾರಿದರು.