ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೂ 7 ದಿನ ಬಾಕಿ ಇದ್ದು, ಅವರ ಅಭಿಮಾನಿಗಳು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಅಭಿಮಾನಿಗಳು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ಕಿಚ್ಚ ಸುದೀಪ್ ಈಗಲೇ ವಿಶೇಷ ಗಿಫ್ಟ್ ನೀಡುವ ಮೂಲಕ ಶುಭ ಕೋರಿದ್ದಾರೆ.
ನಟ ಶಿವರಾಜ್ ಕುಮಾರ್ ಕೊರೊನಾ ಕಾರಣದಿಂದಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಹುಟ್ಟುಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ಇದರಲ್ಲಿ ನನ್ನ ಆರೋಗ್ಯಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ಕೊರೊನಾ ಪರಿಸ್ಥಿತಿ ಎಲ್ಲ ತಿಳಿಯಾದ ಮೇಲೆ ನಾವೆಲ್ಲರೂ ಭೇಟಿಯಾಗೋಣ ಇದು ನನ್ನ ಪ್ರಾಮಿಸ್ ಎಂದು ತಿಳಿಸಿದ್ದರು.
ಅಲ್ಲದೆ ನೀವು ಧೈರ್ಯವಾಗಿರಿ, ನೀತಿ, ನಿಯಮಗಳನ್ನು ಪಾಲಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಸುರಕ್ಷಿತವಾಗಿರಬೇಕು. ಧೈರ್ಯವಾಗಿರಿ ಏನೂ ಆಗಲ್ಲ ದೇವರಿದ್ದಾನೆ. ನಮ್ಮೆಲ್ಲರನ್ನೂ ಕಾಪಾಡಲು ದೇವರು ಇದ್ದೇ ಇರುತ್ತಾನೆ. ಎಲ್ಲರೂ ಸೇರೋಣ ಎಂದು ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ. ಕರುನಾಡ ಚಕ್ರವರ್ತಿಯ ಹುಟ್ಟುಹಬ್ಬವನ್ನು ಸಾಮಾಜಿಕ ಜಾಲತಾಣಗಳಲ್ಲೇ ಗ್ರ್ಯಾಂಡ್ ಆಚರಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
ನೀವು ಮನೆ ಬಳಿ ಸೇರಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸವಾಲಿನ ಸಂಗತಿ. ಹೀಗಾಗಿ ಈ ಬಾರಿ ಹುಟ್ಟುಹಬ್ಬ ಆಚರಣೆ ಬೇಡ, ನಾನೂ ಸಹ ಮನೆಯಲ್ಲಿರುವುದಿಲ್ಲ. ಕೊರೊನಾ ಪರಿಸ್ಥಿತಿ ತಿಳಿಯಾದ ಮೇಲೆ ಒಟ್ಟಿಗೆ ಸೇರೋಣ ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ ಅಭಿಮಾನಿಗಳು ಶಿವಣ್ಣನ ಹುಟ್ಟುಹಬ್ಬವನ್ನು ಸಿಡಿಪಿ(ಕಾಮನ್ ಡಿಪಿ) ಮೂಲಕ ಸಾಮಾಜಿಕ ಜಾಲತಾಣಗಳಲ್ಲೇ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈಗಾಗಲೇ ಇದನ್ನು ಸಿದ್ಧಪಡಿಸಲಾಗಿದ್ದು, ಶನಿವಾರ ಸಂಜೆ ಕಿಚ್ಚ ಸುದೀಪ್ ಅವರಿಂದ ಬಿಡುಗಡೆಗೊಳಿಸಿದ್ದಾರೆ. ಸಿಡಿಪಿ ಬಿಡುಗಡೆ ಮಾಡಿರುವ ಕುರಿತು ಸ್ವತಃ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.