ಬೆಂಗಳೂರು, ಮೇ 27- ರಾಜ್ಯದಲ್ಲಿ ಲಾಕ್ಡೌನ್ ಅನುಷ್ಠಾನಗೊಳಿಸಿದ ಪರಿಣಾಮ ಸಂಕಷ್ಟದಲ್ಲಿದ್ದ ಶ್ರಮಿಕರು, ಮಧ್ಯಮ ವರ್ಗದವರು ಹಾಗೂ ರೈತರಿಗೆ ಸರ್ಕಾರ ಘೋಷಣೆ ಮಾಡಿದ್ದ ವಿಶೇಷ ಪ್ಯಾಕೇಜ್ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ.
ಏಕೆಂದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಘೋಷಣೆ ಮಾಡಿದ್ದ 1,777 ಕೋಟಿ ವಿಶೇಷ ಪ್ಯಾಕೇಜ್ನಲ್ಲಿ ಇಂದಿನವರೆಗೂ ಫಲಾನುಭವಿಗಳಿಗೆ ಬಿಡುಗಡೆ ಮಾಡಿರುವ ಮೊತ್ತ ಕೇವಲ 5.93 ಕೋಟಿ ಮಾತ್ರ. ನಂಬುವುದಕ್ಕೆ ಅಚ್ಚರಿಯಾದರೂ ಇದು ಸತ್ಯ.
ಇನ್ನು ಆಶ್ಚರ್ಯಕರ ಸಂಗತಿ ಎಂದರೆ, ಪ್ಯಾಕೇಜ್ ಘೋಷಣೆಯಾಗಿ ಸರಿಸುಮಾರು 15 ದಿನಗಳು ಕಳೆದರೂ ಸರ್ಕಾರ ಈ ವರೆಗೂ ಯಾರಿಗೆ ಆರ್ಥಿಕ ನೆರವು ನೀಡಬೇಕು ಎಂಬುದರ ಕುರಿತು ಮಾರ್ಗ ಸೂಚಿಯ ಪಟ್ಟಿಯನ್ನು ಬಿಡುಗಡೆಯೇ ಮಾಡಿಲ್ಲ. ಜೊತೆಗೆ ಫಲಾನುಭವಿಗಳನ್ನು ಇಲಾಖವಾರು ಗುರುತಿಸುವ ಕೆಲಸಕ್ಕೂ ಕೈ ಹಾಕದಿರುವುದು ಸರ್ಕಾರದ ಉದಾಸೀನತೆಯನ್ನು ಎತ್ತಿ ತೋರಿಸಿದೆ.
ರಾಜ್ಯ ಸರ್ಕಾರ 11,687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವಿನ ಬೆಳೆಗೆ ಪರಿಹಾರ ಘೋಷಿಸಿತ್ತು. ಹೂವು ಬೆಳೆಗಾರರಿಗೆ ಹೆಕ್ಟೇರ್ಗೆ ಗರಿಷ್ಠ 25 ಸಾವಿರ ಪರಿಹಾರ ನೀಡುವುದಾಗಿ ಹೇಳಿತ್ತು. ಹೂ ಬೆಳೆಗಾರರ ಪರಿಹಾರದ ಮೊತ್ತ 30 ಕೋಟಿ ಎಂದು ಘೋಷಿಸಲಾಗಿತ್ತು. ತೋಟಗಾರಿಕೆ ಇಲಾಖೆಯಿಂದ ಪರಿಹಾರ ವಿತರಿಸುವಂತೆ ಆದೇಶಿಸಲಾಗಿತ್ತು.
ಆದರೆ, ಇದುವರೆಗೂ ತೋಟಗಾರಿಕೆ ಇಲಾಖೆಗೆ ಸರ್ಕಾರ ಹಣ ನೀಡಿಲ್ಲ. ಪರಿಹಾರ ಹೇಗೆ ವಿತರಿಸಬೇಕು ಎಂಬ ಯೋಜನೆಯನ್ನು ಸಿದ್ದಮಾಡಿಕೊಂಡಿಲ್ಲ. ಇದುವರೆಗೂ ನಷ್ಕಕ್ಕೊಳಗಾದ ಹೂ ಬೆಳೆಗಾರರ ಪಟ್ಟಿಕೂಡೂ ಸಿದ್ಧವಾಗಿಲ್ಲ. ಅರ್ಹ ಹೂವು ಬೆಳೆಗಾರರಿಗೆ ಪರಿಹಾರದ ಹಣ ಕನಸಾಗಿಯೇ ಉಳಿದಿದೆ.
ಮಡಿವಾಳ ವೃತ್ತಿಯಲ್ಲಿರುವವರಿಗೆ ತಲಾ 5000ಸಾವಿರ ಪರಿಹಾರ ಘೋಷಿಸಿತ್ತು. ರಾಜ್ಯದಲ್ಲಿರುವ ಅಂದಾಜು 60 ಸಾವಿರ ಮಡಿವಾಳರಿಗೆ ಪರಿಹಾರಕೊಡುವ ಭರವಸೆ ನೀಡಿತ್ತು. ಮಡಿವಾಳ ವೃತ್ತಿಯಲ್ಲಿರುವವರಿಗಾಗಿ 30 ಕೋಟಿ ಪರಿಹಾರ ಮೀಸಲಿಡಲಾಗಿತ್ತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪರಿಹಾರ ವಿತರಿಸಬೇಕು. ಆದರೆ, ಇದುವರೆಗೂ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಣ ನೀಡಿಲ್ಲ. ಹೀಗಾಗಿ ಪರಿಹಾರ ಹೇಗೆ ವಿತರಿಸಬೇಕೆಂಬ ಪಟ್ಟಿಯನ್ನು ಸಿದ್ದಪಡಿಸಿಲ್ಲ. ಸಚಿವ ಶ್ರೀರಾಮುಲು ಸಾರಥ್ಯದ ಇಲಾಖೆಗೇ ಹಣ ನೀಡುವುದು ಹೇಗೆ ಎಂಬ ಅಂದಾಜುಕೂಡ ಇಲ್ಲ.
ಕ್ಷೌರಿಕ ವರ್ಗಕ್ಕೆ ಭರ್ಜರಿ ಪ್ಯಾಕೇಜ್ ಘೋಷಿಸಿದ್ದ ಸರ್ಕಾರ, ಪ್ರತಿಯೊಬ್ಬ ವೃತ್ತಿಪರನಿಗೆ 5 ಸಾವಿರ ನೀಡೋ ವಾಗ್ದಾನ ಮಾಡಿತ್ತು. ಯಡಿಯೂರಪ್ಪ ನೀಡಿದ ಮಾತು ಇಂದಿಗೂ ಅತಂತ್ರವಾಗಿದೆ. 2 ಲಕ್ಷದ 30 ಸಾವಿರಕ್ಷೌರಿಕರಿಗಿನ್ನೂ ನಯಾಪೈಸೆಕೂಡತಲುಪಿಲ್ಲ.
115 ಕೋಟಿ ಮೊತ್ತದ ಪರಿಹಾರ ಪ್ಯಾಕೇಜ್ ಅರ್ಹರಿಗಿನ್ನೂ ಮರೀಚಿಕೆಯಾಗಿದೆ. ಪರಿಹಾರ ನೀಡಬೇಕಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೇ ಇನ್ನೂ ಹಣ ತಲುಪಿಲ್ಲ.
ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗಿದೆ ತಮ್ಮ ಆದಾಯವನ್ನು ಕಳೆದು ಕೊಂಡಿರುತ್ತಾರೆ.
ರಾಜ್ಯದಲ್ಲಿ ಇರುವ ಇಂತಹ 7,75,000 ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ 5000 ರೂ. ಸಣ್ಣ ಹಾಗೂ ಅತಿ ಸಣ್ಣಉದ್ದಿಮೆದಾರರು, ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು ನಡೆಸುವ ಉದ್ದಿಮೆದಾರರು ತಮ್ಮ ಉದ್ದಿಮೆಗಳನ್ನು ತೆರೆಯಲಾಗಿದೆ ಹಾಗೂ ತಮ್ಮ ಉತ್ಪನ್ನಗಳನ್ನು ಸಾಗಿಸಿ ಮಾರಾಟ ಮಾಡಲಾಗದೆ ನಷ್ಟವನ್ನು ಅನುಭವಿಸಿದ್ದರು.
ಆದ್ದರಿಂದ ಅತಿಸಣ್ಣ, ಸಣ್ಣ ಹಾಗೂ ಉದ್ಯಮ ಉದ್ದಿಮೆಗಳ ವಿದ್ಯುತ್ ಬಿಲ್ಲಿನ ಫಿಕ್ಸಡ್ ಚಾರ್ಜ್ ಎರಡು ತಿಂಗಳ ಅವಗೆ ಪೂರ್ತಿಯಾಗಿ ಮನ್ನಾ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು.
ನೇಕಾರರಿಗೆ ನೆರವಾಗಲು 109 ಕೋಟಿ ರೂ.ಗಳ ವೆಚ್ಚದಲ್ಲಿ ನೇಕಾರರ ಸಾಲ ಮನ್ನಾಯೋಜನೆಯನ್ನು ಘೋಷಿಸಲಾಗಿತ್ತು. ಈ ಯೋಜನೆಗೆ ಈಗಾಗಲೇ ಹಿಂದಿನ ವರ್ಷ 29 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಉಳಿದಿರುವ 80 ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಿ ನೇಕಾರರಿಗೆ ಹೊಸ ಸಾಲಗಳು ದೊರಕಿಸಿಕೊಡಲು ಅನುವು. ರಾಜ್ಯದಲ್ಲಿರುವ 15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಪೈಕಿ ಈಗಾಗಲೇ 11.80 ಲಕ್ಷಕಟ್ಟಡಕಾರ್ಮಿಕರಿಗೆ ಸರ್ಕಾರದಿಂದ 2000 ರೂ.ಗಳನ್ನು ಅವರ ಬ್ಯಾಂಕ್ಖಾತೆಗೆ ನೇರವಾಗಿ ವರ್ಗಾವಣೆ ಮಾಡುವುದಾಗಿ ಸರ್ಕಾರ ಪ್ರಕಟಿಸಿತ್ತು.
ಇನ್ನುಳಿದ 4 ಲಕ್ಷ ಕಟ್ಟಡ ಕಾರ್ಮಿಕರಿಗೆ ಅವರವರ ಬ್ಯಾಂಕ್ ಖಾತೆಯ ವಿವರಗಳು ದೊರೆತ ನಂತರ 2,000 ರೂ.ಗಳನ್ನು ವರ್ಗಾಯಿಸುವುದು, ಈ ಎಲ್ಲ ಕಟ್ಟಡಕಾರ್ಮಿಕರಿಗೆ ಈಗಾಗಲೇ ನೀಡಿರುವ 2,000 ರೂ.ಗಳ ಜೊತೆಗೆ ಹೆಚ್ಚುವರಿಯಾಗಿ 3,000 ರೂ.ಗಳನ್ನು ನೀಡಲು ಸರ್ಕಾರ ನಿರ್ಧರಿಸಿತ್ತು.
ಇದರ ಜೊತೆಗೆ ಹೆಚ್ಚುವರಿಯಾಗಿ ಪ್ರಾಕೃತಿಕ ವಿಕೋಪಗಳಲ್ಲಿ ಮೃತಪಟ್ಟ ಕುರಿ, ಮೇಕೆ, ಜಾನುವಾರುಗಳಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ಮುಂದುವರೆಸಲಾಗುವುದು.
ಮೆಕ್ಕೆಜೋಳ ಬೆಳೆದ ರಾಜ್ಯದ 10 ಲಕ್ಷ ರೈತರಿಗೆ ತಲಾ ಐದು ಸಾವಿರ ರೂಪಾಯಿಯಂತೆ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು. ಇದಕ್ಕಾಗಿ ಈಯೋಜನೆಗೆ 500 ಕೋಟಿ ಮೀಸಲಿಟಿದ್ದರು.
ಸರ್ಕಾರದ ಮಾರ್ಗ ಸೂಚಿಯೇ ಈವರೆಗೂ ಇನ್ನೂ ಇತ್ಯರ್ಥವಾಗಿಲ್ಲ. ಪರಿಹಾರಕ್ಕೆ ಫಲಾನುಭವಿಗಳ ಆಯ್ಕೆ, ಮಾನದಂಡ, ವಿತರಣೆ ಎಲ್ಲವೂ ಅಸ್ಪಷ್ಟವಾಗಿದೆ. ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆಯಂತಾಗಿದ್ದ ಪರಿಹಾರ ಕೇವಲ ಮೂಗಿಗೆ ಬೆಣ್ಣೆ ಸವರಿದಂತೆ ಎಂಬ ಪ್ರಶ್ನೆ ಎದುರಾಗಿದೆ.
ಕಡೆ ಪಕ್ಷ ಫಲಾನಿಭವಿಗಳ ಪಟ್ಟಿಯನ್ನು ಸಿದ್ದಪಡಿಸುವಂತೆ ಸಚಿವರು ಅಕಾರಿಗಳಿಗೆ ಸೂಚನೆಯನ್ನೇ ಕೊಟ್ಟಿಲ್ಲ. ಸರ್ಕಾರದಿಂದ ಮಾರ್ಗ ಸೂಚಿಯೇ ಪ್ರಕಟವಾಗಿಲ್ಲವಾದ ಕಾರಣ ನಾವು ಹೇಗೆ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಬೇಕೆಂಬ ಆಸಹಾಯಕತೆ ವ್ಯಕ್ತಪಡಿಸುತ್ತಾರೆ.
ಮುಖ್ಯಮಂತ್ರಿ, ಸಚಿವರು ಹಾಗೂ ಅಕಾರಿಗಳ ನಡುವೆ ಸಮನ್ವಯದ ಕೊರತೆಯೇ ಈ ಆಚಾತುರ್ಯಕ್ಕೆ ಕಾರಣ ಎನ್ನಲಾಗುತ್ತಿದೆ. ಇತ್ತ ಇಂದು ಅಥವಾ ನಾಳೆಯೋ ತಮಗೆ ಸರ್ಕಾರದಿಂದ ಹಣ ಬರುತ್ತದೆ ಎಂದು ಕನಸು ಕಾಣುತ್ತಿದ್ದ ಜನರು ಆಕಾಶದತ್ತ ಮುಖಮಾಡಿ ದಿಕ್ಕು ಕಾಣದಂತಾಗಿದ್ದಾರೆ.