ನೆಲಮಂಗಲ: 18 ತಿಂಗಳ ಮಗುವನ್ನು ಹಣಕ್ಕಾಗಿ ಅಪಹರಿಸಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎರಡು ದಿನದ ಹಿಂದೆ ಮನೆ ಮುಂದೆ ಇದ್ದ ಮಗುವನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿದ್ದರು. ಇಂದು ಪ್ರಕರಣ ಭೇದಿಸಿದ ಪೊಲೀಸರು ಪೋಷಕರಿಗೆ ಮಗುವನ್ನು ಹಸ್ತಾಂತರಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ. ಬೆಂಗಳೂರು ಹೊರವಲಯ ಮಾಗಡಿ ರಸ್ತೆಯ ಕಡಬಗೆರೆ ಬಳಿ ಮಗು ಅಪಹರಣವಾಗಿತ್ತು. ಮಾಚೋಹಳ್ಳಿಯ ರವಿ ದಂಪತಿಯ 18 ತಿಂಗಳ ಹೆಣ್ಣು ಮಗುವನ್ನು ಅಪಹರಣ ಮಾಡಿದ್ದರು.
ಅಪಹರಣವಾದ ಮಗುವನ್ನು 48 ಗಂಟೆಯೊಳಗೆ ರಕ್ಷಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಂಧ್ರಹಳ್ಳಿಯ ತಿಪ್ಪೇಶ ಹಾಗೂ ರಾಜೇಶ್ ಬಂಧಿಸಿ, ಮಗುವನ್ನು ಮಾದನಾಯಕನಹಳ್ಳಿ ಪೊಲೀಸರು ರಕ್ಷಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್.ಪಿ.ರವಿ ಡಿ ಚೆನ್ನಣ್ಣನವರ್ ಸಮ್ಮುಖದಲ್ಲಿ ಮಗು ಹೆತ್ತವರ ಕೈಸೇರಿಸಿದ್ದಾರೆ. ಎಸ್.ಪಿ ಕಾಲಿಗೆ ಬಿದ್ದು ಮಗುವಿನ ತಂದೆ ಧನ್ಯವಾದ ತಿಳಿಸಿದ್ದಾರೆ.
ಇಡೀ ಕಾರ್ಯಾಚರಣೆಯನ್ನು ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಸತ್ಯನಾರಾಯಣ್ ನೇತೃತ್ವದಲ್ಲಿ ನಡೆಸಿದ್ದು, ಕಾರ್ಯಾಚರಣೆ ಯಶಸ್ವಿಯಾಗಿರುವುದಕ್ಕೆ ಹಲವೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ವೇಳೆ ನೆಲಮಂಗಲ ಉಪವಿಭಾಗ ಡಿವೈಎಸ್ಪಿ ಮೋಹನ್ ಕುಮಾರ್ ಉಪಸ್ಥಿತರಿದ್ದರು.