ಬೆಂಗಳೂರು: ನನ್ನ ಫೋನ್ ಟ್ಯಾಪಿಂಗ್ ಆಗ್ತಿರೋದು ನಿಜ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಎರಡು ಟ್ವೀಟ್ ಮಾಡಿರುವ ಸಚಿವರು, ಡಿಕೆ ಶಿವಕುಮಾರ್ ಅವರೇ, ನೀವು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದಾಗ ಧರ್ಮ-ಸಂಸ್ಕೃತಿಯ ಪ್ರತೀಕ, ಪವಿತ್ರವಾದ ಮನಸ್ಸುಳ್ಳ ಆದಿಚುಂಚನಗಿರಿ, ರಂಭಾಪುರಿ, ಸಿದ್ಧಗಂಗಾ ಮಠದ, ಸಿರಿಗೆರೆ ಮಠ, ಸುತ್ತೂರು ಮಠ ಶ್ರೀಗಳು ಸೇರಿದಂತೆ 7 ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಮಾಡಿದ್ದು ಅದು ನೆನಪಿದೆಯಾ ಎಂದು ಪ್ರಶ್ನಿಸಿದ್ದಾರೆ.ಸ್ವಾಮೀಜಿಗಳ ಫೋನ್ ಕದ್ದಾಲಿಕೆಯ ಕೇಸ್ ಇನ್ನೂ ಜೀವಂತವಾಗಿದೆ. ನಿಮ್ಮ ಫೋನ್ ಕದ್ದಾಲಿಕೆ ಮಾಡುವಂತಹ ದರಿದ್ರ ನಮ್ಮ ಸರ್ಕಾರಕ್ಕೆ ಬಂದಿಲ್ಲ.
ನಿಮ್ಮ ಹೇಳಿಕೆ ಹಾಸ್ಯಾಸ್ಪದ. ಪ್ರತಿ ಮಾತಿನಲ್ಲೂ ಪ್ರಚಾರ ಬಯಸುತ್ತೀರಲ್ಲ. ನಾವು ಅಧಿಕಾರದಲ್ಲಿದ್ದಾಗ ಅನೇಕ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ದೆವು? ಎಂಬ ಸತ್ಯವನ್ನು ಹೇಳಿಬಿಡಿ ಎಂದು ಡಿಕೆಶಿ ವಿರುದ್ಧ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.