ಬೆಳಗಾವಿ: ‘ಕಿತ್ತೂರು ರಾಣಿ ಚನ್ನಮ್ಮನ ಸಲುವಾಗಿ ಯಾವುದೇ ಮೂಢನಂಬಿಕೆ ನನಗೆ ಅಡ್ಡಬರುವುದಿಲ್ಲ. ಚನ್ನಮ್ಮನ ಸಲುವಾಗಿ ಅಧಿಕಾರ ಹೋದರೆ ಬಹಳ ಸಂತೋಷಪಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಿಲ್ಲೆಯ ಕಿತ್ತೂರಿನಲ್ಲಿ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಕಿತ್ತೂರಿಗೆ ಬಂದ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯಕ್ಕೆ ಸಡ್ಡು ಹೊಡೆದಿದ್ದೀರಿ’ ಎಂಬ ಪ್ರಶ್ನೆಗೆ, ‘ಚಾಮರಾಜನಗರಕ್ಕೆ ಹೋಗಬೇಡ ಎಂದಿದ್ದರು ಹೋಗಿದ್ದೆ. ಕಿತ್ತೂರಿಗೆ ಬರಬೇಡ ಎಂದಿದ್ದರು ಬಂದಿದ್ದೇನೆ. ಹಿಂದೆ ಕಾಕತಾಳೀಯವಾಗಿ ಕೆಲವು ಘಟನೆ ನಡೆದಿರಬಹುದು. ಇಲ್ಲಿಗೆ ಬರದಿದ್ದವರೂ ಶಾಶ್ವತವಾಗಿ ಅಧಿಕಾರದಲ್ಲಿ ಇರಲಾಗುವುದಿಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎನ್ನುವ ಕಾಲಾತೀತ ಸತ್ಯವನ್ನು ಅರ್ಥ ಮಾಡಿಕೊಂಡಿಕೊಂಡು, ಮೂಢನಂಬಿಕೆಗೆ ಯಾವುದೇ ಅರ್ಥವಿಲ್ಲ ಎನ್ನುವುದನ್ನು ಅರಿತು ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿದರು.
‘ಕಿತ್ತೂರಿಗೂ ನನಗೂ ಉತ್ತಮ ಒಡನಾಟವಿದೆ. ಇಲ್ಲಿಗೆ ಬಂದಾಗಲೆಲ್ಲಾ ಸ್ಫೂರ್ತಿಯನ್ನು ತೆಗೆದುಕೊಂಡು ಹೋಗುತ್ತೇನೆ. ನನ್ನ ವಿಚಾರ, ಗುರಿ ಹಾಗೂ ಸಂಕಲ್ಪ ಗಟ್ಟಿಯಾಗುತ್ತದೆ. ಅದು ಚನ್ನಮ್ಮನ ಮಹಿಮೆ. ಚಿಕ್ಕವನಿದ್ದಾಗ ನನ್ನ ತಾಯಿ ರಾಣಿ ಚನ್ನಮ್ಮನ ಕಥೆಯನ್ನು ಬಗ್ಗೆ ಹಲವು ಬಾರಿ ಹೇಳುತ್ತಿದ್ದರು. ವಿಶೇಷವಾದ ಭಕ್ತಿ ಮೂಡಿಸಿದ್ದಳು. ಅದು ಇನ್ನೂ ಜೀವಂತವಾಗಿದೆ. ಇಲ್ಲಿಗೆ ಬಂದಾಗಲೆಲ್ಲಾ ಮತ್ತಷ್ಟು ಗಟ್ಟಿಯಾಗುತ್ತದೆ’ ಎಂದರು.
‘ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಐದಲ್ಲದಿದ್ದರೆ ಹೆಚ್ಚು ಎಕರೆ ಜಾಗ ಪಡೆದು ಅಭಿವೃದ್ಧಿಪಡಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.