ಹುಬ್ಬಳ್ಳಿ: ವಿಜಯಾನಂದ ಸಿನಿಮಾ ಬಿಡುಗಡೆಯಾದ ಬಳಿಕ ಕನ್ನಡದಲ್ಲೂ ಹಾಗೂ ಬೇರೆ ಭಾಷೆಗಳಲ್ಲೂ ಸಿನಿಮಾ ಮಾಡುತ್ತೇವೆ. ಮುಂಬರುವ ಸಿನಿಮಾಗಳ ಬಜೆಟ್ ಖಂಡಿತವಾಗಿಯೂ ದೊಡ್ಡದಿರುತ್ತದೆ. ಸಿನಿಮಾ ಇಂಡಸ್ಟ್ರಿಗೆ ಪರಿಚಿತರಿಲ್ಲದವರನ್ನು ಪರಿಚಯಸಬೇಕು ಅನ್ನೋದೆ ನಮ್ಮ ಸಂಸ್ಥೆಯ ಗುರಿ ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರು ಹೇಳಿದರು.
ಹುಬ್ಬಳ್ಳಿ ಸಮೀಪದ ವರೂರಿನ ವಿಆರ್ಎಲ್ ಕ್ಯಾಂಪಸ್ನಲ್ಲಿ ತಮ್ಮ ಜೀವನಾಧಾರಿತ ‘ವಿಜಯಾನಂದ’ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿಂದು ಭಾಗವಹಿಸಿ ಮಾತನಾಡಿದರು.
ಪ್ರಾಯಶಃ ಹುಬ್ಬಳ್ಳಿಯಲ್ಲಿ ಮೊದಲ ಕನ್ನಡ ಸಿನಿಮಾದ ಮಹೂರ್ತ ಆಗಿರೋದು ಇದೇ ಮೊದಲು ಅನಿಸುತ್ತದೆ. ಈ ಕಾರ್ಯಕ್ರಮಕ್ಕೆ ಆತ್ಮಿಯರಾದ ರವಿಚಂದ್ರನ್ ಹಾಗೂ ಗಣೇಶ್ ಅವರು ಶೂಟಿಂಗ್ ಬಿಟ್ಟು ಬಂದಿದ್ದಾರೆ. ಅವರ ಪ್ರೀತಿಗೆ ಹಾಗೂ ಮಾಧ್ಯಮದವರ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.
ಹದಿನೇಳು ವರ್ಷದವನಿದ್ದಾಗ ಮನೆತನದ ಬಿಸಿನೆಸ್ ಬಿಟ್ಟು ಬೇರೆ ಬಿಸಿನೆಸ್ ಮಾಡಬೇಕು ಅಂತ ಹೇಳಿದ್ದೆ. ನಾನು ಬಿಸಿನೆಸ್ ಶುರು ಮಾಡಿದಾಗ ಒಬ್ಬರು ಹೇಳಿದ್ರು ಒಂದು ಲಾರಿ ಇಟ್ಟುಕೊಂಡು ಏನ್ ಮಾಡ್ತಿಯಾ ಅಂದಿದ್ರು. ಆಗ ನಾನು ನಾಲ್ಕು ಲಾರಿ ಮಾಡಬೇಕು ಅಂತಾ ಒಂದು ಗುರಿಯನ್ನು ಇಟ್ಟುಕೊಂಡೆ. ಸಾಯುವ ಮೊದಲು 4 ಟ್ರಕ್ ನಿಲ್ಲಿಸಿ ಸಾಯ್ತಿನಿ ಅಂತ ಚಾಲೆಂಜ್ ಮಾಡಿದ್ದೆ. ಅದಾದ ಕೆಲವೇ ವರ್ಷಗಳಲ್ಲಿ 5 ಟ್ರಕ್ ನಿಲ್ಲಿಸಿದೆ. ಆಗಲೇ ನಾನು ಜೀವನದಲ್ಲಿ ಒಂದು ದೊಡ್ಡ ಪಾಠ ಕಲಿತೆ ಎಂದು ಹೇಳಿದರು.
ನನಗೂ ಸಿನಿಮಾ ಹೀರೋ ಆಗಬೇಕು ಅಂತ ಕನಸಿತ್ತು. ಈ ಬಗ್ಗೆ ನಟ ರಮೇಶ್ ಅರವಿಂದ ಅವರ ಬಳಿ ಹೇಳಿಕೊಂಡಿದ್ದೆ ಎಂದು ಹಿಂದಿನ ದಿನಗಳನ್ನು ಮೆಲಕು ಹಾಕಿದ ವಿಜಯ ಸಂಕೇಶ್ವರ ಅವರು ಬಿಸಿನೆಸ್ ಬೆಳದ ಹಾಗೆ ನನಗೆ ಗೊತ್ತಿಲ್ಲದೇ ಅಭಿಮಾನಿಗಳು ಹುಟ್ಟಿಕೊಂಡರು. ಇದು 46 ವರ್ಷದ ಪರಿಶ್ರಮ. ಕೊನೇ ಉಸಿರು ಇರುವವರೆಗೂ ಕಾಯಕ ಮಾಡುತ್ತೇನೆಂದು ಹೇಳಿದರು.
ಆನಂದ ಸಂಕೇಶ್ವರ ಅವರು ನನ್ನ ಜತೆ ಜತೆಗೆ ಸಂಸ್ಥೆ ಕಟ್ಟುವಲ್ಲಿ, ಮುನ್ನಡೆಸುವಲ್ಲಿ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ನಾನು ಅನಾರೋಗ್ಯವಾಗಿದ್ದಾಗ ನಾನು ಮಾಡಿದ ಸಾಲದ ಲಿಸ್ಟ್ ಕೊಟ್ಟೆ. ಆಗ ಆನಂದ ಸಂಕೇಶ್ವರ ಕೇವಲ 9 ವರ್ಷದವರಿದ್ದರು. ಕಳೆದ 15ವರ್ಷಗಳಿಂದ ಆನಂದ ಸಂಕೇಶ್ವರ ಅವರ ಮೇಲೆ ಕಂಪನಿಯ ಭಾರ ಹೆಚ್ಚಾಗಿದೆ. ಮೂವತ್ತು ವರ್ಷದಿಂದ ನನ್ನ ಮಗ ನಮ್ಮ ಕಂಪನಿಯಲ್ಲಿ ಇದ್ದಾರೆ. ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಚಿತ್ರೋದ್ಯಮದಲ್ಲಿಯೂ ಸಾಧನೆ ಮಾಡುತ್ತಾರೆ ಅನ್ನೊ ಭರವಸೆ ನನಗಿದೆ ಎಂದರು.