ಯಳಂದೂರು: ಅಗಲಿದ ಪತ್ನಿಯ ಫೋಟೋಗೆ ಹೂ ತರಲೆಂದು ಮನೆಯಿಂದ ಹೊರಬಂದ ಗಂಡನ ಮೇಲೆ ಟೆಂಪೋ ಹರಿದಿದ್ದು, ಆತ ಸ್ಥಳದಲ್ಲೇ ದುರಂತ ಅಂತ್ಯ ಕಂಡ ಹೃದಯ ವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆ ಯಳಂದೂರು ಪಟ್ಟಣದಲ್ಲಿ ಸಂಭವಿಸಿದೆ.
ಯರಗಂಬಳ್ಳಿ ಗ್ರಾಮದ ಮರಿಸ್ವಾಮಿ(40) ಮೃತರು. ಇವರ ಪತ್ನಿ ಇತ್ತೀಚಿಗೆ ಕರೊನಾ ಸೋಂಕಿಗೆ ಬಲಿಯಾಗಿದ್ದರು. ಮನೆಯಲ್ಲಿದ್ದ ಪತ್ನಿಯ ಫೋಟೋಗೆ ಹೂ ಹಾಕಲೆಂದು ಇಂದು ಬೆಳಗ್ಗೆ ಹೂ ಖರೀದಿಸಿ ತರಲು ಪಟ್ಟಣಕ್ಕೆ ಮರಿಸ್ವಾಮಿ ಬಂದಿದ್ದರು. ಯಳಂದೂರು ಪಟ್ಟಣದ ಬಸ್ ನಿಲ್ದಾಣ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿ ನಡೆದುಕೊಂಡು ಮರಿಸ್ವಾಮಿ ಹೋಗುತ್ತಿದ್ದರು. ಈ ವೇಳೆ ಜವರಾಯನಂತೆ ಬಂದ ಟೆಂಪೋ ಮರಿಸ್ವಾಮಿಯ ತಲೆ ಮೇಲೆ ಹರಿದಿದೆ.
ಮರಿಸ್ವಾಮಿಯ ತಲೆ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟೆಂಪೋ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಮೃತನಿಗೆ ತಂದೆ-ತಾಯಿ ಇದ್ದಾರೆ. ಸೊಸೆಯನ್ನ ಕಳೆದುಕೊಂಡ ಬೆನ್ನಲ್ಲೇ ಮಗನ ಸಾವಿನ ಸುದ್ದಿಕೇಳಿ ಹಿರಿಜೀವಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಅವಘಡ ಸಂಭವಿಸಿರುವ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಕಿರಿದಾಗಿದೆ. ರಸ್ತೆ ಪಕ್ಕದ ಭೂಮಿ ಸ್ವಾಧೀನ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಕಿರಿದಾದ ರಸ್ತೆಯಲ್ಲಿ ಆಗಿಂದಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇವೆ.