ಬೆಳಗಾವಿ: ಕೊವೀಡ್ನಿಂದ ಕೆಲಸ ಕಳೆದುಕೊಂಡು ಸಂಕಷ್ಟಕ್ಕೀಡಾದ ಬಡ ಕೂಲಿ ಕಾರ್ಮಿಕರಿಗೆ ಒಂದಿಷ್ಟು ಅನುಕೂಲವಾಗಲೇಂದು ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಎಲ್ಲಾ ಕಾರ್ಮಿಕರಿಗೆ ಆಹಾರ ಕಿಟ್ ಅನ್ನು ವಿತರಣೆ ಮಾಡಲಾಗುತ್ತಿದೆ. ಆದರೆ ಇಂತಹ ಕಿಟ್ಗಳು ಬಡ ಕೂಲಿ ಕಾರ್ಮಿಕರ ಕೈ ಸೇರುವ ಬದಲು ಪ್ರಭಾವಿ ಬಿಜೆಪಿ ನಾಯಕರ ಮನೆಗಳನ್ನು ಸೇರುತ್ತಿವೆ ಎಂಬ ಆರೋಪ ಕೇಳಿ ಬಂದಿವೆ.
ಹೌದು, ಬೆಳಗಾವಿ ದಕ್ಷಿಣ ವುಧಾನಸಭಾ ಕ್ಷೇತ್ರದಲ್ಲಿನ ನೋಂದಾಯಿತ ಕಾರ್ಮಿಕರಿಗಾಗಿ ಹಲವು ತಿಂಗಳ ಹಿಂದೆ ಕಾರ್ಮಿಕ ಇಲಾಖೆ 4000ಕ್ಕೂ ಹೆಚ್ಚು ಕಿಟ್ಗಳನ್ನು ಕೆಲ ರಾಜಕಾರಣಿಗಳಿಗೆ ನೀಡಿದೆ. ಇವರು ಇಲ್ಲಿಯತನಕ ಕಿಟ್ ವಿತರಣೆ ಮಾಡದೆ ಹಳೆ ಪುಣೆ-ಬೆಂಗಳೂರು ರಸ್ತೆಯ ಸಾಯಿ ಹಾಲ್ನಲ್ಲಿ ಸಂಗ್ರಹಿಸಿಟ್ಟಿದ್ದರು. ಆದರೆ ಸದ್ಯ ಅಲ್ಲಿ ಮದುವೆಗಳು ಪ್ರಾರಂಭವಾಗುತ್ತಿರುವುದರಿಂದ ಸಿಕ್ಕ ಸಿಕ್ಕ ಕಡೆಗಳಲ್ಲಿ ತಮಗೆ ಬೇಕಾದ ಬಿಜೆಪಿ ನಾಯಕರ ಮನೆಗಳಿಗೆ ಸಾಗಾಟ ಮಾಡಲಾಗುತ್ತಿದೆ.
ಬಿಜೆಪಿ ಕಾರ್ಪೋರೇಟರ್ ರೇಷ್ಮಾ ಕಾಮಕರ ಅವರ ಸಂಬಂಧಿ ನಾರಾಯಣ ಕಾಮಕರ ಅವರ ಮನೆ ಹೋಗಿ ನೋಡಿದ್ದಾಗ ಸಾವಿರಾರು ಕಿಟ್ ಸಂಗ್ರಹಿಸಿರುವುದು ಬಯಲಾಗಿದೆ. ಈ ಕಿಟ್ ನಿಮ್ಮ ಮನೆಯಲ್ಲಿ ಏಕೆ ಇವೆ? ಎಂದು ಕೇಳಿದರೆ ಮೊದಲು ನಮಗೆ ಗೊತ್ತಿಲ್ಲ ಎಂದಿದ್ದಾರೆ. ಬಳಿಕ ಬಡವರಿಗೆ ಹಂಚಲು ಇಲ್ಲಿ ಸಂಗ್ರಹಿಸಿದ್ದಾರೆ ಎನ್ನುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದು ಒಂದೇ ಕಡೆಯಲ್ಲ ಹಲವು ಬಿಜೆಪಿ ನಾಯಕರ ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ರೀತಿ ಬಡ ಕಾರ್ಮಿಕರಿಗೆ ವಿತರಣೆ ಮಾಡದೇ ಬಿಜೆಪಿ ನಾಯಕರ ಮನೆಗಳಿಗೆ ಸಾಗಾಟ ಮಾಡುತ್ತಿರುವುದನ್ನ ಗಮನಿಸಿದ ಸಾಮಾಜಿಕ ಹೋರಾಟಗಾರ್ತಿ ಸರಳಾ ಸಾತಪೋತೆ ಎಲ್ಲರಿಗೂ ತರಾಟೆಗೆ ತೆಗೆದುಕೊಂಡರು.
ಈ ಸಂಬಂಧ ಮಾತಾಡಿರುವ ಅಧಿಕಾರಿಗಳು, ಮೂರು ತಿಂಗಳ ಹಿಂದೆ ಕಾರ್ಮಿಕರಿಗೆ ವಿತರಣೆ ಮಾಡುವಂತೆ ಶಾಸಕ ಅಭಯ್ ಪಾಟೀಲ್ಗೆ ನೀಡಿದ್ದೇವೆ. ನಮಗೆ ಎಲ್ಲ ಕಾರ್ಮಿಕರಿಗೆ ವಿತರಣೆ ಸಾಧ್ಯವಿಲ್ಲ. ಪರಿಶೀಲಿಸುತ್ತೇವೆ ಅಂತ ಸಮಜಾಯಿಷಿ ನೀಡಿದ್ದಾರೆ.
ಇದರ ನಡುವೆ ಸದ್ಯ ಆಹಾರ ಕಿಟ್ ವಿತರಣೆ ವಿಚಾರವನ್ನ ಮುಂದಿಟ್ಟುಕೊಂಡು ನಗರ ಪೋಲಿಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಅಲ್ಲದೇ ಪ್ರತಿಭಟನೆ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಶಾಸಕ ಅಭಯ್ ಪಾಟೀಲ್ ಸ್ಪಷ್ಟನೆ ನೀಡಬೇಕಿದೆ.