ನ್ಯೂಯಾರ್ಕ್: ಟ್ವಿಟರ್ ಇಂಡಿಯಾ ಮತ್ತು ಕೇಂದ್ರ ಸರ್ಕಾರ ನಡುವಿನ ಮುಸುಕಿನ ಗುದ್ದಾಟ ಮತ್ತೊಂದು ಘಟ್ಟ ತಲುಪಿದೆ. ಭಾರತದಲ್ಲಿ ಟ್ವಿಟರ್ ಕಾರ್ಯಾಚರಣೆ ನಿರ್ವಹಣೆಗೆ ಯಾವುದೇ “ಕಂಟ್ರಿ ಡೈರೆಕ್ಟರ್'(ದೇಶೀಯ ನಿರ್ದೇಶಕ)ರನ್ನು ನಿಯೋಜಿಸದೆ ಇರಲು ಸಾಮಾಜಿಕ ಜಾಲತಾಣ ಸಂಸ್ಥೆ ತೀರ್ಮಾನಿಸಿದೆ.
ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಷ್ ಮಹೇಶ್ವರಿ ಅವರನ್ನು ಅಮೆರಿಕಕ್ಕೆ ದಿಢೀರ್ ಎತ್ತಂಗಡಿ ಮಾಡಿದೆ. ಅಲ್ಲದೆ, ಮನೀಷ್ಗೆ ಸ್ಯಾನ್ ಫ್ರಾನ್ಸಿಸ್ಕೋದ ಹಿರಿಯ ನಿರ್ದೇಶಕ ಹುದ್ದೆಯನ್ನೂ ನೀಡಲಾಗಿದೆ.
ಲೀಡರ್ಶಿಪ್ ಕೌನ್ಸಿಲ್ ಮಾರ್ಗದರ್ಶನದಂತೆ ಪ್ರಮುಖ ಎಕ್ಸಿಕ್ಯೂಟಿವ್ಗಳು ಟ್ವಿಟರ್ನ ಸಾಗರೋತ್ತರ ಎಕ್ಸಿಕ್ಯೂಟಿವ್ಸ್ಗೆ ಕಾಲಕಾಲಕ್ಕೆ ವರದಿ ನೀಡಲಿದ್ದಾರೆ. ಟ್ವಿಟರ್ ಜಪಾನ್ನ ವ್ಯವಸ್ಥಾಪಕ ನಿರ್ದೇಶಕ ಯು- ಸ್ಯೂನ್ ಮತ್ತು ಲೀಡರ್ ಶಿಪ್ ಕೌನ್ಸಿಲ್ ಜತೆಗೂಡಿ ಭಾರತದಲ್ಲಿನ ಸಂಸ್ಥೆಯ ಕಾರ್ಯತಂತ್ರ, ಬೆಳವಣಿಗೆಗಳ ಬಗ್ಗೆ ಗಮನ ಕೊಡಲಿದ್ದಾರೆ.