ಬೆಂಗಳೂರು: ಮಹಿಳೆಯೊಬ್ಬರು ಸಿಎಂ ನಿವಾಸದ ಬಳಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮಕ್ಕೆ ನಿರೂಪಕರ ವಿಚಾರವಾಗಿ ಧರಣಿ ನಡೆಸುತ್ತಿದ್ದಾರೆ. ಕೇವಲ ಇಬ್ಬರು ನಿರೂಪಕರಿಗೆ ಮಾತ್ರ ಅವಕಾಶ ಕೊಡುತ್ತಾರೆ. ಆ ಇಬ್ಬರು ನಿರೂಪಕರಿಂದ ಹಲವರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಇತರೆ ನಿರೂಪಕರಿಗೂ ಅವಕಾಶ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಸಿಎಂ ಬೊಮ್ಮಾಯಿ (Basavaraj Bommai) ನಿವಾಸದ ಬಳಿ ಡಾ.ಗಿರಿಜಾ ಎಂಬುವವರು ಪ್ರತಿಭಟನೆ (Protest) ನಡೆಸುತ್ತಿದ್ದಾರೆ.
ಪ್ರತಿ ಸರ್ಕಾರಿ ಕಾರ್ಯಕ್ರಮಕ್ಕೆ ಇಬ್ಬರೇ ನಿರೂಪಕರಿಗೆ ಅವಕಾಶ ನೀಡಲಾಗುತ್ತಿದೆ. ಅಪರ್ಣಾ ಹಾಗೂ ಶಂಕರ್ ಪ್ರಕಾಶ್ ಅವರಿಗೆ ಮಾತ್ರ ಅವಕಾಶ ನೀಡುತ್ತಿದ್ದಾರೆ. ಸಾಕಷ್ಟು ಉತ್ತಮವಾದ ನಿರೂಪಕರಿದ್ದಾರೆ. ಆದರೆ ಯಾವ ಕಲಾವಿದರಿಗೂ ಅವಕಾಶ ಸಿಗುತ್ತಿಲ್ಲ. ಕಲಾವಿದರು, ಸಾಹಿತಿಗಳು ಎಲ್ಲಿ ಹೋಗಬೇಕು. ಇಬ್ಬರಿಂದ ನಮಗೆ ಸಾಕಷ್ಟು ಅನ್ಯಾಯವಾಗಿದೆ. ಹೊಸ ಸರ್ಕಾರ ಬಂದಿದೆ. ಹೊಸಬರಿಗೆ ಅವಕಾಶ ನೀಡಿ ಅಂತ ಮಹಿಳೆ ಕಣ್ಣೀರಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ವರಿಗೂ ಸಮಪಾಲು ಅಂತ ಹೇಳುತ್ತಾರೆ. ಆದರೆ ಸರ್ಕಾರಿ ಕಾರ್ಯಕ್ರಮ ನಿರೂಪಕರ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಕೊವಿಡ್ ಸಮಯದಲ್ಲಿ ಕಲಾವಿದರು ಬಳಹ ಕಷ್ಟದಲ್ಲಿದ್ದಾರೆ. ಹೀಗಾಗಿ ಸರ್ಕಾರಿ ಕಾರ್ಯಕ್ರಮಗಳಿಗೆ ಬೇರೆ ಬೇರೆ ನಿರೂಪಕರಿಗೂ ಅವಕಾಶ ನೀಡಬೇಕು ಅಂತ ಒತ್ತಾಯಿಸಿದ್ದಾರೆ.