ಬೆಳಗಾವಿ: ನಾನು ಅಧಿಕಾರಕ್ಕಾಗಿ ಅಥವಾ ಯಾವಾಗಲೂ ಮಂತ್ರಿಗಿರಿ ಬೇಕೆಂದು ದುಂಬಾಲು ಬಿದ್ದವನಲ್ಲ. ಅಧಿಕಾರ ಇಲ್ಲದ ಸಂದರ್ಭದಲ್ಲಿ ನಾನು ವಿಚಲಿತನಾಗಿಯೂ ಇಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಒತ್ತಡಕ್ಕೆ, ಲಾಭಿಗೆ ಮಣಿದು ಮಂತ್ರಿಗಿರಿ ನೀಡಲ್ಲ. ಬಿಜೆಪಿ ಪಕ್ಷದಲ್ಲಿ ಲಾಭಿ ಮಾಡಿದ್ರೆ ಮಂತ್ರಿ ಆಗ್ತಿವಿ ಎಂಬ ಭ್ರಮೆಯಲ್ಲಿ ಬಹಳಷ್ಟು ಜನರು ಇದ್ದಾರೆ. ಆದರೆ ನಮ್ಮ ಬಿಜೆಪಿ ರಾಷ್ಟ್ರೀಯ ನಾಯಕರು, ಹೈಕಮಾಂಡ್ ಲಾಭಿಗೆ , ಒತ್ತಡಕ್ಕೆ ಮಣಿಯುವುದಿಲ್ಲ ಎಂದರು.
ಶಾಸಕರಿಗೆ ಮಂತ್ರಿ ಮಾಡಬೇಕಿತ್ತು ಹೀಗಾಗಿ ಅನೇಕರಿಗೆ ಸಚಿವ ಸ್ಥಾನದಿಂದ ಕೈಬಿಟ್ಟಿದ್ದಾರೆ. ಹೀಗಾಗಿ ನನ್ನನ್ನು ಕೈಬಿಟ್ಟಿರಬಹುದು. ನಾನು ಶಾಸಕ ಅಲ್ಲದಿರುವುದಕ್ಕೆ ಮಂತ್ರಿ ಸ್ಥಾನ ಕೈ ತಪ್ಪಿದೆ . ನಾನು ಯಾವುದೇ ಸಂದರ್ಭದಲ್ಲೂ ಬೇಸರ ಮಾಡಿಕೊಳ್ಳಲ್ಲ ಲಕ್ಷ್ಮಣ ಸವದಿ ಅಂದ್ರೆ ಬಿಸಿಲಿಗೆ ಬಾಡೋದು, ಮಳೆಯಲ್ಲಿ ಚಿಗುರುವುದು ಅಲ್ಲ. ಯಾವಾಗಲೂ ಒಂದೇ ರೀತಿ ಇರ್ತಿನಿ. ನನ್ನ ಗುರಿ ಅಥಣಿ ಕ್ಷೇತ್ರದ ಅಭಿವೃದ್ಧಿ, ಕ್ಷೇತ್ರದ ಜನತೆ ರಕ್ಷಣೆ ಎಂದರು.