ಹುಬ್ಬಳ್ಳಿ,ಜು,3- ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠ ಹಿಂದುಗಳಿಗೆ ಸೇರಿದ್ದು. ಅದರಂತೆ ಈಗಿನ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಟ್ ನಿರ್ದೇಶನದ ಮೇರೆಗೆ ಹಿಂದಿನ ಕಾಂಗ್ರೆಸ್ ಸರ್ಕಾರ ನ್ಯಾ. ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು.
ಅದರಲ್ಲಿ ಎಡಪಂಥೀಯರು, ಹಿಂದು ವಿರೋಧಿಗಳು ಇದ್ದರು. ಈ ಆಯೋಗದ ವರದಿ ತಿರಸ್ಕರಿಸಿ, ದತ್ತಪೀಠ ಹಿಂದುಗಳಿಗೆ ಸೇರಿದೆ ಎಂದು ಶೀಘ್ರವೇ ಸುಗ್ರೀವಾಜ್ಞೆ ಹೊರಡಿಸಬೇಕು. ಇಲ್ಲವಾದರೆ ಎಲ್ಲ ಶಾಸಕರಿಗೆ ಘೇರಾವ್ ಹಾಕುವ ಕುರಿತು ತೀರ್ವನಿಸಲಾಗುವುದು.
ದತ್ತಪೀಠದ ಹೆಸರು ಹೇಳಿಯೇ ಅಧಿಕಾರಕ್ಕೆ ಬಂದವರು, ದತ್ತರನ್ನೇ ಮರೆತರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಜಪಯಜ್ಞ: ಕರೊನಾ ಸೋಂಕು ನಾಶ, ಹಿಂದುಗಳ ಆರೋಗ್ಯ, ಚಿಕ್ಕಮಗಳೂರಿನ ದತ್ತಪೀಠ ಮುಕ್ತಿಗಾಗಿ ಜ. 5ರಿಂದ ಶ್ರೀ ಗುರುದೇವದತ್ತ ನಾಮದ ಒಂದು ಕೋಟಿ ಜಪಯಜ್ಞ ನಡೆಸಲಾಗುವುದು. ಭಕ್ತರು ಅವರವರ ಮನೆಯಲ್ಲಿಯೇ ನಿತ್ಯ ಸಾವಿರ ಜಪ ಮಾಡಿ, ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಕರೊನಾ ಸೋಂಕು ಹೊಡೆದೋಡಿಸಲು ಆಯುರ್ವೆದ ಚಿಕಿತ್ಸೆ ಪರಿಚಯಿಸಿದ ಡಾ. ಗಿರಿಧರ ಕಜೆ, ಯೋಗ ಗುರು ಬಾಬಾ ರಾಮದೇವ ಅವರ ನಡೆ ಸ್ತುತ್ಯರ್ಹ. ಅಲೋಪಥಿ ಔಷಧ ಕಂಪನಿಗಳ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿಯಬಾರದು ಎಂದರು.
ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ದತ್ತಪೀಠ ಹಿಂದುಗಳಿಗೆ ಸೇರಿದ್ದು ಎಂದು ಘೊಷಣೆ ಆಗುವವರೆಗೆ ತಲೆಕೂದಲು, ಗಡ್ಡ ತೆಗೆಯುವುದಿಲ್ಲ ಎಂದು ಶಪಥಗೈದರು. ಧಾರವಾಡ ಅಧ್ಯಕ್ಷ ರಾಜು ಗಾಡಗೋಳಿ ಇದ್ದರು