ಕನ್ನಡದಲ್ಲಿ ಹಿಟ್ ಚಿತ್ರಗಳನ್ನು ನಿರ್ಮಿಸುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್ ಇಂದು ಹೊಸ ಚಿತ್ರವನ್ನ ಘೋಷಿಸುವುದಾಗಿ ತಿಳಿಸಿತ್ತು, ಅದರಂತೆ ಚಿತ್ರದ ಹೆಸರು ಹಾಗೂ ತಂಡವನ್ನು ಘೋಷಿಸಿದ್ದು, ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದೆ. ತನ್ನ ಹನ್ನೊಂದನೇ ಚಿತ್ರದ ಮೊದಲ ಪೋಸ್ಟರ್ಅನ್ನು ಬಿಡುಗಡೆಗೊಳಿಸಿರುವ ಹೊಂಬಾಳೆಯ ನೂತನ ಚಿತ್ರಕ್ಕೆ ನಾಯಕನಾಗಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನೂ ರಿಷಬ್ ಶೆಟ್ಟಿ ಹೊತ್ತಿದ್ದು, ಚಿತ್ರಕ್ಕೆ ‘ಕಾಂತಾರ’ ಎಂದು ನಾಮಕರಣ ಮಾಡಲಾಗಿದೆ.
ಪ್ರಸ್ತುತ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಅಡಿಯಲ್ಲಿ ಬಹುನಿರೀಕ್ಷಿತ ಸಿನಿಮಾಗಳು ಮೂಡಿಬರುತ್ತಿವೆ. ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಹಾಗೂ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಕೆಲಸಗಳು ಬಿರುಸಿನಿಂದ ಸಾಗಿವೆ. ಶ್ರೀಮುರಳಿ ನಟನೆಯ ‘ಭಗೀರ’ ಚಿತ್ರವನ್ನೂ ಅನೌನ್ಸ್ ಮಾಡಲಾಗಿದ್ದು, ಅದು ಇನ್ನು ಸೆಟ್ಟೇರಬೇಕಿದೆ. ಜೂನ್ನಲ್ಲಿ ಪುನೀತ್ ರಾಜ್ಕುಮಾರ್ ಮತ್ತು ಪವನ್ ಕುಮಾರ್ ಕಾಂಬಿನೇಷನ್ನ ‘ದ್ವಿತ್ವ’ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ಲುಕ್ ಲಾಂಚ್ ಮಾಡಲಾಗಿತ್ತು. ಈಗ ದ್ವಿತ್ವಕ್ಕೆ ನಾಯಕಿಯನ್ನೂ ಘೋಷಿಸಲಾಗಿದ್ದು, ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ನಟಿಸಲಿದ್ದಾರೆ. ಹೊಂಬಾಳೆಯ 10ನೇ ಚಿತ್ರವಾಗಿ ರಕ್ಷಿತ್ ಶೆಟ್ಟಿ ಕತೆ, ನಿರ್ದೇಶನದಲ್ಲಿ ‘ರಿಚರ್ಡ್ ಆಯಂಟೊನಿ’ ಘೋಷಣೆ ಆಗಿತ್ತು. ಈಗ 11ನೇ ಸಿನಿಮಾವನ್ನೂ ಘೋಷಿಸಿರುವ ನಿರ್ಮಾಣ ಸಂಸ್ಥೆ, ಅದ್ದೂರಿ ಬಜೆಟ್ಗಳ, ಬೃಹತ್ ತಾರಾಗಣದ ಚಿತ್ರಗಳನ್ನು ಏಕಕಾಲಕ್ಕೆ ನಿರ್ಮಿಸುತ್ತಿದೆ.