ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಸೇರಿದಂತೆ ಒಟ್ಟು 6 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು ಒಂಬತ್ತು ಗಂಟೆಯಿಂದ ನಿರಂತರವಾಗಿ ಶೋಧ ಮುಂದುವರಿದಿದೆ. ಕಾರ್ಯಕರ್ತರು ಶಾಸಕರ ಮನೆ ಮುಂದೆ ಜಮಾಯಿಸಿ, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಕಾಂಗ್ರೆಸ್ನವರ ಮೇಲೆ ಮಾತ್ರ ದಾಳಿ ಆಗುತ್ತಿದೆ. ಬಿಜೆಪಿ ಅವರ ಮೇಲೆ ಯಾಕೆ ಇಡಿ ದಾಳಿ ಆಗಲ್ಲ ಅಂತ ಮಹಿಳಾ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.
ಜಮೀರ್ ನಿವಾಸದ ಮುಂದೆ ಕಣ್ಣೀರು ಹಾಕುತ್ತಿರುವ ಬೆಂಬಲಿಗರು, ಪ್ರಾರ್ಥನೆ ಮಾಡುತ್ತಿದ್ದರು. ಮನೆ ಮುಂದೆ ಜಮಾಯಿಸಿದ್ದ ಬೆಂಬಲಿಗರನ್ನು ಪೊಲೀಸರು ವಾಪಸ್ಸು ಕಳುಹಿಸುತ್ತಿದ್ದಾರೆ. ಇನ್ನು ಶಿವಮೊಗ್ಗದಲ್ಲಿ ಶಾಸಕ ಜಮೀರ್ ಮನೆ ಮೇಲೆ ಇಡಿ ಅಧಿಕಾರಿಗಳ ದಾಳಿಯನ್ನು ಖಂಡಿಸಿ ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ಎಸ್.ಎನ್ ವೃತ್ತದಲ್ಲಿ ಧರಣಿ ಮಾಡುತ್ತಿದ್ದಾರೆ.
ಅಪರಾಧಿಗಳನ್ನ ರಕ್ಷಿಸುವುದರಲ್ಲಿ ಕಾಂಗ್ರೆಸ್ ಮುಂದೆ ಇರುತ್ತೆ ಅಂತ ದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. ಜಮೀರ್ ವ್ಯವಹಾರಗಳ ಮೇಲೆ ಅನುಮಾನ ಹಿನ್ನೆಲೆ ಇಡಿ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ದಾಳಿ ಮಾಡುತ್ತೆ. ಜಮೀರ್ ಅಹ್ಮದ್ ತಪ್ಪು ಮಾಡದಿದ್ದರೆ ಶಿಕ್ಷೆ ಆಗುವುದಿಲ್ಲ. ಇಡಿ ದಾಳಿ ಬಗ್ಗೆ ಕಾಂಗ್ರೆಸ್ ಆರೋಪಿಸುವುದು ಸರಿಯಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡಂತೆ ಆಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.