ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಕೆಳಗಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದ ರಮೇಶ್ ಜಾರಕಿಹೊಳಿ ಇದೀಗ, ನನಗೂ ಒಳ್ಳೆಯ ಕಾಲ ಬರಲಿದೆ. ನಾನೀಗ ಪ್ರತಿ ದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ… ಎಂದಿದ್ದಾರೆ.
ಬಿಎಸ್ವೈ ಸಂಪುಟದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಕಳೆದುಕೊಂಡರು. ಇದೀಗ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲೂ ಇವರಿಗೆ ಸ್ಥಾನ ಸಿಕ್ಕಿಲ್ಲ. ಇವರ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಅವಕಾಶ ನೀಡಲಾಗುತ್ತೆ ಎನ್ನಲಾಗಿತ್ತಾದರೂ ಆದರೂ ಕೈಗೂಡಲಿಲ್ಲ. ಈ ಬಾರಿ ಜಾರಕಿಹೊಳಿ ಕುಟುಂಬಕ್ಕೆ ಮಂತ್ರಿ ಪಟ್ಟ ಕೈ ತಪ್ಪಿದ್ದು,. ಅತ್ತ ಸಿಡಿ ಕೇಸ್ ಸಂಬಂಧ ಬಿ ರಿಪೋರ್ಟ್ ಹಾಕಲಾಗುತ್ತಿದೆ ಎಂಬ ಮಾತು ಕೂಡ ಕೇಳಿ ಬಂದಿದೆ.
ಈ ಕುರಿತು ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ‘ನನಗೂ ಒಳ್ಳೆಯ ಕಾಲ ಬರಲಿದೆ. ನಮ್ಮ ಅಧ್ಯಕ್ಷರನ್ನ ಭೇಟಿಯಾಗಲು ಬಂದಿದ್ದೆ. ನಮ್ಮ ಕ್ಷೇತ್ರದ ಜನರು ನನ್ನೊಟ್ಟಿಗೆ ಇದ್ದಾರೆ. ನಾನೀಗ ಪ್ರತಿ ದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ. ಬಿ ರಿಪೋರ್ಟ್ ಹಾಕೋದು ನನಗೆ ಗೊತ್ತಿಲ್ಲ. ನೋಡೋಣ ಏನಾಗುತ್ತೋ… ಎಂದರು.