ಬೆಳಗಾವಿ(ಮಾ. 5): ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದಾರೆ. ಇದೀಗ ಬೆಳಗಾವಿ ಉಸ್ತುವಾರಿ ಹೊಣೆ ಯಾರ ಹೆಗಲು ಏರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಜಿಲ್ಲೆಯಲ್ಲಿ ನಾಲ್ವರು ಸಚಿವರು ಇದ್ದರೂ ಇಬ್ಬರು ನಡುವೆ ನೇರ ಪೈಪೋಟಿ ಕಂಡು ಬರುತ್ತಿದೆ. ಅಷ್ಟಕ್ಕೂ ಉಸ್ತುವಾರಿ ಸಚಿವ ಸ್ಥಾನ ಸಿಕ್ಕರೆ ಜಿಲ್ಲಾ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿದೆ ಎಂಬುದು ರಾಜಕೀಯ ಲೆಕ್ಕಾಚಾರ.
ರಾಜ್ಯದಲ್ಲಿ ರಾಜಕೀಯ ಜಿದ್ದಾಜಿದ್ದಿ, ಪ್ರತಿಷ್ಠೆಗೆ ಹೆಸರಾಗಿದ್ದು ಬೆಳಗಾವಿ ರಾಜಕೀಯ. ಜಿಲ್ಲೆಯಲ್ಲಿ ಸಿಡಿ ಪ್ರಕರಣದಲ್ಲಿ ಸಿಲುಕಿ ಪ್ರಭಾವಿ ನಾಯಕ ರಮೇಶ ಜಾರಕಿಹೊಳಿ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದಾರೆ. . ರಮೇಶ ಜಾರಕಿಹೊಳಿಯಿಂದ ತೆರವಾಗಿರೋ ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನಕ್ಕಾಗಿ ಇದೀಗ ದೊಡ್ಡ ಮಟ್ಟದ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.
2004ರಿಂದ ರಾಜ್ಯದಲ್ಲಿ ರಚನೆಯಾದ ಎಲ್ಲಾ ಸರ್ಕಾರಗಳಲ್ಲಿ ಜಾರಕಿಹೊಳಿ ಸಹೋದರರು ಸಚಿವರಾಗಿದ್ದಾರೆ. ಜತೆಗೆ 2013ರಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಹ ಸಹೋದರರ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ರಾಜಕಾಣರದಲ್ಲಿ ಪ್ರಬಲ ಹಿಡಿತವನ್ನು ಸಾಧಿಸಿದ್ದಾರೆ ಜಾರಕಿಹೊಳಿ ಸಹೋದರರು. ಇದೀಗ ಮೊದಲ ಬಾರಿ ಉಸ್ತುವಾರಿ ಸಚಿವ ಸ್ಥಾನ ಹಾಗೂ ಸಂಪುಟದಲ್ಲಿ ಸಚಿವ ಗಿರಿ ತಪ್ಪಿದೆ. ಇದನ್ನು ಸರಿ ಮಾಡಿಕೊಳ್ಳಲ್ಲು ಇನ್ನಿಲ್ಲದ ಕಸರತ್ತನ್ನು ಸಹೋದರರು ನಡೆಸುತ್ತಿದ್ದಾರೆ ಎಂಬುದು ಆಪ್ತ ವಲಯದಲ್ಲಿ ಚರ್ಚೆಯಾಗುತ್ತಿದೆ.
ಸದ್ಯ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇಮಕವಾಗುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನ ಮುಗಿದ ಬಳಿಕ ಬಾಲಚಂದ್ರಗೆ ಪಟ್ಟ ಕಟ್ಟಲು ಬಿಜೆಪಿಯಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ. ಇದು ಯಶಸ್ವಿಯಾದರೆ ಮತ್ತೆ ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರ ಅಧಿಕಾರ ಮುಂದುವರೆಯಲಿದೆ. ಇಲ್ಲವೇ ಕತ್ತಿ, ಸವದಿ ಜಿಲ್ಲಾ ರಾಜಕಾರಣದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆ ಇದೆ.