ಬೆಂಗಳೂರು, ಏಪ್ರಿಲ್ 1: ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ ನನ್ನ ಹೆಸರು ಹೇಳಿದರಷ್ಟೇ ಮಾರ್ಕೆಟಿಂಗ್ ಸಿಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಅವರಿಗೆ ನನ್ನ ಹೆಸರು ಬಳಸಿಕೊಳ್ಳದೇ ಮಾರುಕಟ್ಟೆಯೇ ಸಿಗುವುದಿಲ್ಲ ಎಂದರು.
ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ರೀತಿ ಸಂಬಂಧವಿಲ್ಲ. ನನಗೆ ಸಂಬಂಧವಿಲ್ಲದ ವಿಚಾರದಲ್ಲಿ ನನ್ನ ಹೆಸರು ಬಳಸಿಕೊಳ್ಳಲಾಗುತ್ತಿದೆ. ಅವರು ನನ್ನ ಹೆಸರು ಬಳಸಿಕೊಂಡು ಮಾರ್ಕೆಟಿಂಗ್ ಮಾಡಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ. ಅವರಿಗೆಲ್ಲ ಒಳ್ಳೆಯದ್ದಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸಿಡಿ ಪ್ರಕರಣದ ಬಗ್ಗೆ ಹೇಳಿಕೆ ದಾಖಲಿಸಿದ ಸಂತ್ರಸ್ತೆ:
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಮರೆಯಾಗಿದ್ದ ಸಂತ್ರಸ್ತ ಯುವತಿ ಮಾರ್ಚ್ 30ರಂದು ನ್ಯಾಯಾಧೀಶರ ಎದುರ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಇದರ ಬೆನ್ನಲ್ಲೇ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೊಲ್ಲೂರು ಮುಕಾಂಬಿಕೆ ದರ್ಶನಕ್ಕೆ ತೆರಳಿದ್ದರು. ಸಿಡಿ ಲೇಡಿ ಇಟ್ಟ ಹೆಜ್ಜೆಯಿಂದ ಅತ್ಯಾಚಾರ ಆರೋಪ ಪ್ರಕರಣ ಬಿಗಿಯಾಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ಮತ್ತೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.