ಬೆಂಗಳೂರು: ಶಿವಮೊಗ್ಗ ಹುಣಸೋಡು ಗ್ರಾಮದಲ್ಲಿ ಭಾರೀ ಅವಘಡ ಸಂಭವಿಸಿದ್ದು, ಸಾವು- ನೋವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಂತಾಪ ಸೂಚಿಸಿ, ಸರ್ಕಾರಕ್ಕೆ ಆಗ್ರಹವೊಂದನ್ನು ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಿಚ್ಚ, ಶಿವಮೊಗ್ಗದ ಹುಣಸೋಡಿನಲ್ಲಿ ಮೃತಪಟ್ಟ ಕಾರ್ಮಿಕರ ಅತ್ಮಕ್ಕೆ ಶಾಂತಿಸಿಗಲಿ, ಪ್ರತಿ ಪ್ರಾಣವು ಅಮೂಲ್ಯ ಸರ್ಕಾರ ಅಗತ್ಯ ಕ್ರಮ ತಗೆದು ಕೊಳ್ಳಲಿ ಎಂದು ಬರೆದುಕೊಂಡು ಹ್ಯಾಶ್ ಟ್ಯಾಗ್ ಬಳಸಿ ಮೊದಲುಮಾನವನಾಗು ಎಂದು ಹೇಳಿ ಕೈ ಮುಗಿಯುವ ಸಿಂಬಲ್ ಹಾಕಿದ್ದಾರೆ.
ಶಿವಮೊಗ್ಗದ ಹುಣಸೋಡಿನಲ್ಲಿ
ಮೃತಪಟ್ಟ ಕಾರ್ಮಿಕರ ಅತ್ಮಕ್ಕೆ ಶಾಂತಿಸಿಗಲಿ,
ಪ್ರತಿ ಪ್ರಾಣವು ಅಮೂಲ್ಯ
ಸರ್ಕಾರ ಅಗತ್ಯ ಕ್ರಮತಗೆದು ಕೊಳ್ಳಲಿ, ????#ಮೊದಲುಮಾನವನಾಗು — Kichcha Sudeepa (@KicchaSudeep) January 22, 2021
ಹುಣಸೋಡು ಗ್ರಾಮದಲ್ಲಿ ನಿನ್ನೆ ರಾತ್ರಿ 10.30ರ ಸುಮಾರಿಗೆ ಭಾರೀ ಶಬ್ದವೊಂದು ಕೇಳಿಬಂದಿದ್ದು, ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ. ಬಳಿಕ ಅದು ಕಲ್ಲು ಕ್ವಾರೆಯಲ್ಲಿ ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡಿದ್ದು ಎಂಬುದು ಬಯಲಾಗಿದೆ. ಘಟನೆಯಲ್ಲಿ ಐವರು ಮೃತಪಟ್ಟಿರುವ ಮಾಹಿತಿ ಲಭಿಸಿದೆ.
ಇನ್ನು ಸ್ಪೋಟದ ತೀವ್ರತೆಗೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರ್ಮಿಕರ ಮೃತದೇಹ ಛಿದ್ರ ಛಿದ್ರಗೊಂಡಿದೆ. ಮರಗಳು ಕೂಡ ನಾಶವಾಗಿದ್ದು, ಸ್ಥಳೀಯ ಮನೆಗಳಿಗೂ ಹಾನಿ ಸಂಭವಿಸಿದೆ. ದುರಂತ ಸಂಬಂಧ ಕ್ರಷರ್ ಮಾಲೀಕ ಸುಧಾಕರ್ ಹಾಗೂ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 5 ಲಕ್ಷ ಪರಿಹಾರ ಘೋಷಿಸಿದ್ದಾರೆ.