ಧಾರವಾಡ ಹೊರವಲಯದ ತಡಸಿನಕೊಪ್ಪ ಬಳಿಯ ಇಟಿಗಟ್ಟಿ ರಸ್ತೆ ಮಾರ್ಗದಲ್ಲಿ ಕಳೆದ ದಿನ ನಡೆದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ಗಲಾಟೆ ನಡೆದು ಗಾಳಿಯಲ್ಲಿ ಗುಂಡು ಹಾರಿಸಿ ವ್ಯಕ್ತಿಯೊಬ್ಬನಿಗೆ ಗಾಯಗೊಳಿಸಿದ ಪ್ರಕರಣದಲ್ಲಿ ಐವರನ್ನ ಬಂಧಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ಧಾರವಾಡದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲು ಅಂಗರಕ್ಷಕರು (ಬೌನ್ಸರ್ಸ್) ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಇತ್ತಾದರೂ, ಘಟನೆಯ ಬಳಿಕ ಪೊಲೀಸರಿಗೆ ಲಭ್ಯವಾದ ಕೆಲವು ಪ್ರಮುಖ ವಿಡಿಯೋ ತುಣುಕುಗಳ ಆಧಾರದ ಮೇಲೆ ತನಿಖೆ ನಡೆಸಿ ಐದು ಜನರನ್ನು ಬಂಧಿಸಲಾಗಿದೆ. ಫಿಲೋಮಿನಾ, ಪ್ರವೀಣ್ ಸುತಾರ್, ಇಂದರಪಾಲ್, ಬೆಂಜಮಿನ್ ಮತ್ತು ವಿಶಾಲ್ ಬಂಧಿತರಾಗಿದ್ದು, ಇನ್ನೋರ್ವ ಸುಂದರ್ ಪಾಲ್ ಬಂಧನಕ್ಕಾ ಬಲೆ ಬೀಸಲಾಗಿದೆ. ಆರೋಪಿಗಳಿಂದ ಒಂದು ಪಿಸ್ತೂಲ್, ರಿವಾಲ್ವಾರ ಸೇರಿ ಕೃತ್ಯದ ವೇಳೆ ಇದ್ದ ಫಾರ್ಚೂನರ ಕಾರ್ ವಶಕ್ಕೆ ಪಡೆಯಲಾಗಿದೆ. ಇನ್ನೂ ಪ್ರವೀಣ್ ಎಂಬುವವರು ಈ ಜಮೀನನ್ನು ಖರೀದಿ ಮಾಡಿದ್ದರು ಎಂದು ಹೇಳಲಾಗುತ್ತಿದೆಯಾದರೂ, ಸದ್ಯ ಲಭ್ಯವಿರುವ ಅಧಿಕೃತ ದಾಖಲೆಗಳು ಬೇರೆಯೇ ಕಥೆ ಹೇಳುತ್ತಿವೆ ಎನ್ನಲಾಗಿದೆ. ಗಾಯಾಳು ವಿಠಲ್ ಜಮೀನಿನ ಅಸಲಿ ಮಾಲೀಕರ ಸಂಬಂಧಿಯಾಗಿದ್ದು, ಘಟನಾ ಸ್ಥಳದಲ್ಲಿದ್ದಾಗ ಅವರ ಮೇಲೆ ಗುಂಡಿನ ದಾಳಿಯಾಗಿದೆ. ಸದ್ಯ ಆರೋಪಿಗಳ ವಿರುದ್ಧ ಕೊಲೆ ಯತ್ನ ಹಾಗೂ ಎಸ್ಸಿ-ಎಸ್ಟಿ (ಅಟ್ರಾಸಿಟಿ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.
Laxmi News 24×7