Breaking News

ವೆಚ್ಚಕ್ಕೆ ಬ್ರೇಕ್ ಹಾಕ್ಳು ಕೆಲ ಇಲಾಖೆಗಳನ್ನು ವಿಲೀನನಕ್ಕೆ ಮುಂದಾದ ರಾಜ್ಯ ಸರ್ಕಾರ

Spread the love

ಬೆಂಗಳೂರು, ಮೇ 25- ಲಾಕ್‍ಡೌನ್ ಹಿನ್ನೆಲೆ ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ರಾಜ್ಯ ಸರ್ಕಾರ ವೆಚ್ಚ ಕಡಿತದ ಮೊರೆ ಹೋಗಿದೆ. ಸರ್ಕಾರ ಕೆಲ ಇಲಾಖೆಗಳನ್ನು ವಿಲೀನ ಮಾಡಲು ಚಿಂತನೆ ನಡೆಸಿದೆ.

ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆ, ಸಹಕಾರ ಮತ್ತು ಕೃಷಿ ಮಾರುಕಟ್ಟೆ ಇಲಾಖೆ, ಸಹಕಾರಿ ಲೆಕ್ಕ ಪರಿಶೀಲನಾ ಇಲಾಖೆ ಮತ್ತು ಲೆಕ್ಕ ಪತ್ರ ಇಲಾಖೆ ಸೇರಿದಂತೆ ಇಲಾಖೆಗಳನ್ನು ವಿಲೀನ ಮಾಡಲು ಸರ್ಕಾರ ಹೊರಟಿದೆ

ಜತೆಗೆ ಕೆಲ ಹುದ್ದೆಗಳನ್ನು ರದ್ದುಗೊಳಿಸಲೂ ಮುಂದಾಗಿದೆ. ಇದರ ಸಾಧಕ-ಬಾಧಕದ ಪರಿಶೀಲನೆ ನಡೆಸಲು ಸಮಿತಿಯನ್ನೂ ರಚಿಸಲಾಗಿದೆ.ಆದರೆ, ಈ ವೆಚ್ಚ ಕಡಿತದ ಕ್ರಮಗಳು ಸರ್ಕಾರಿ ನೌಕರರ ಕಣ್ಣು ಕೆಂಪಾಗಿಸಿದೆ. ಲಾಕ್‍ಡೌನ್ ಹಿನ್ನೆಲೆ ರಾಜ್ಯ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದೆ.

ಇದಕ್ಕಾಗಿ ಸರ್ಕಾರ ದುಂದು ವೆಚ್ಚ ಕಡಿತದ ಮೊರೆ ಹೋಗಿದೆ. ಅಗತ್ಯ ವೆಚ್ಚಗಳು ಬಿಟ್ಟು ಬೇರೆ ಯಾವುದೇ ಖರ್ಚು-ವೆಚ್ಚಗಳನ್ನು ಮಾಡದಂತೆ ಈಗಾಗಲೇ ಆರ್ಥಿಕ ಇಲಾಖೆ ಎಲ್ಲಾ ವಿಭಾಗಗಳಿಗೆ ಸುತ್ತೋಲೆ ಹೊರಡಿಸಿದೆ.

ಇದರ ಅಂಗವಾಗಿ ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆಯನ್ನು (ಡಿಎ) 2021ರ ಜುಲೈ ವರೆಗೆ ತಡೆ ಹಿಡಿದಿದೆ. ಇದರ ಜತೆಗೆ ಸರ್ಕಾರಿ ನೌಕರರ ಗಳಿಕೆ ರಜೆಗೂ ಕತ್ತರಿ ಹಾಕಿದೆ. ಗಳಿಕೆ ರಜೆಯನ್ನು ಸಂಬಳವಾಗಿ ಪರಿವರ್ತಿಸುವ ಅವಕಾಶವನ್ನು ರದ್ದುಪಡಿಸಿದೆ.

ಸರ್ಕಾರಿ ನೌಕರರ ಡಿಎಗೆ ತಡೆ ನೀಡಿರುವುದರ ಜತೆಗೆ ಕೆಲ ಇಲಾಖೆಗಳ ವಿಲೀನದ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಆ ಮೂಲಕ ಸರ್ಕಾರದ ಮೇಲಾಗುತ್ತಿರುವ ಹೊರೆಯನ್ನು ಕಡಿಮೆಗೊಳಿಸಲು ಮುಂದಾಗಿದೆ. ಆದರೆ, ಸರ್ಕಾರದ ಈ ನಡೆಗೆ ಸರ್ಕಾರಿ ನೌಕರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲಾಕ್‍ಡೌನ್ ಹಿನ್ನೆಲೆ ಜನರ ಸಂಕಷ್ಟ, ಸರ್ಕಾರದ ಆರ್ಥಿಕ ಸಂಕಷ್ಟ ನೋಡಿ ಸರ್ಕಾರದ ಕಠಿಣ ನಿರ್ಧಾರಗಳನ್ನು ನೌಕರರು ಅರೆ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ.ಈಗ ಆರ್ಥಿಕ ಚಟುವಟಿಕೆ ನಿಧಾನವಾಗಿ ಪ್ರಾರಂಭವಾಗಿರುವ ಹಿನ್ನೆಲೆ ಇದೀಗ ಸರ್ಕಾರಿ ನೌಕರರು ತಡೆ ಹಿಡಿದಿರುವ ಡಿಎ ಅನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಲು ಮುಂದಾಗಿದೆ.

ಈ ಇಲಾಖೆಗಳ ವಿಲೀನದ ಬಗ್ಗೆ ಸರ್ಕಾರಿ ನೌಕರರು ಇದೀಗ ಪ್ರತಿಭಟನೆ ಹಾದಿ ಹಿಡಿಯಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಇಲಾಖೆಗಳ ವಿಲೀನ ಮಾಡದಂತೆ ಜತೆಗೆ ಹುದ್ದೆಗಳನ್ನು ರದ್ದು ಮಾಡದಿರುವಂತೆ ಆಗ್ರಹಿಸಿ ವಿಧಾನಸೌಧದಲ್ಲೇ ಮೌನ ಧರಣಿ ನಡೆಸಲೂ ಚಿಂತನೆ ನಡೆಸುತ್ತಿದ್ದೇವೆ ಎಂದು ಸಚಿವಾಲಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಮೂರ್ತಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಇಲಾಖೆಗಳ ವಿಲೀನದ ಪ್ರಸ್ತಾಪ ಇತ್ತು. ಆದರೆ, ನೌಕರರ ತೀವ್ರ ವಿರೋಧದ ಹಿನ್ನೆಲೆ ಆ ಪ್ರಸ್ತಾಪವನ್ನು ಕೈಬಿಡಲಾಗಿತ್ತು. ಇದೀಗ ಸರ್ಕಾರ ಮತ್ತೆ ಆ ಪ್ರಸ್ತಾಪವನ್ನು ಜಾರಿಗೊಳಿಸಲು ಮುಂದಾಗಿರುವುದು ನೌಕರರ ಕಣ್ಣು ಕೆಂಪಾಗಿಸಿದೆ.

ಡಿಎ ತಡೆ ಹಿಡಿದಿರುವುದಕ್ಕೆ ಕೇಂದ್ರ ಸರ್ಕಾರದತ್ತ ಕೈ ತೋರಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ನೌಕರರ ವೇತನಕ್ಕೂ ನಮಗೂ ಭಾರಿ ವ್ಯತ್ಯಾಸ ಇದೆ. ನಾವು ದೇಶದಲ್ಲೇ ಅತಿ ಕಡಿಮೆ ವೇತನ ಪಡೆಯುತ್ತಿದ್ದೇವೆ.

ಹೀಗಾಗಿ ಡಿಎ ತಡೆ ಹಿಡಿದು ಅನ್ಯಾಯ ಮಾಡಬಾರದು. ಅದನ್ನು ಮುಂದಿನ ವರ್ಷ ಜೂನ್ ತಿಂಗಳು ಒಟ್ಟಿಗೆ ಬಿಡುಗಡೆ ಮಾಡಬೇಕು. ಜತೆಗೆ ವೇತನವನ್ನೂ ಕಡಿತಗೊಳಿಸಬಾರದು ಎಂದು ಸಚಿವಾಲಯ ಸರ್ಕಾರಿ ನೌಕರರ ಒತ್ತಾಯವಾಗಿದೆ.


Spread the love

About Laxminews 24x7

Check Also

ಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್!

Spread the loveಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್! ಬೆಂಗಳೂರು: ವಯೋವೃದ್ಧ ಕಾರು ಚಾಲಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ