ಬನವಾಸಿ
” ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ವೈಭವವನ್ನು ವಿಶ್ವಕ್ಕೆ ಪರಿಚಯಿಸುವ ಕದಂಬೋತ್ಸವ – 2020 ”
ಉತ್ತರ ಕನ್ನಡದ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆಯುತ್ತಿರುವ ಕದಂಬೋತ್ಸವ-೨೦೨೦ ಕಾರ್ಯಕ್ರಮದ ಅಂಗವಾಗಿ ಪ್ರಚಾರದ ನಿಮಿತ್ತ ಕದಂಬೋತ್ಸವದ ಪೂರ್ವದಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲೂ ಸಂಚರಿಸಿ ಬನವಾಸಿಗೆ ಆಗಮಿಸಿದ ಕದಂಬ ಜ್ಯೋತಿಯನ್ನು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಸ್ವಾಗತಿಸಿ, ಶ್ರೀ ಮಧುಕೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ನಂತರ ನಡೆದ ಮೆರವಣಿಗೆಯನ್ನು ಕುಂಭ ಹೊರುವುದರ ಮೂಲಕ ಚಾಲನೆ ನೀಡಿದರು.
ಶಾಲಾ ವಿದ್ಯಾರ್ಥಿಗಳಿಂದ ನಯನಮನೋಹರ ಕುಂಭ ಮೇಳ ಹಾಗೂ ಆಕರ್ಷಕ ಪಥಸಂಚಲನ :
ಭಾರತ ಸೇವಾದಳ, ಸ್ಕೌಟ್ ಮತ್ತು ಗೈಡ್ಸ್ ಸಮವಸ್ತ್ರದೊಂದಿಗೆ ಆಕರ್ಷಕ ಪಥಸಂಚಲನ, ಅತ್ಯಾಕರ್ಷಕ ವಾದ್ಯ ತಂಡದೊಂದಿಗೆ ಮೆರವಣಿಗೆಯನ್ನು ಪ್ರಾರಂಭಿಸಿ, ಮೆರವಣಿಗೆ ಮಧುಕೇಶ್ವರ ದೇವಸ್ಥಾನ ಮುಖ್ಯ ದ್ವಾರದಿಂದ ಪ್ರಾರಂಭಗೊಂಡು ಮಾರಿಹೊಕ್ಕುಲು ಮೈದಾನದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಹಳಿಯಾಳ ತಂಡದಿಂದ ಸಿದ್ಧರ ಕುಣಿತ, ಯಲ್ಲಾಪುರ ತಂಡದಿಂದ ಗೌಳಿ ನೃತ್ಯ, ಶಿರಸಿ ತಂಡದ ಬೇಡರ ನೃತ್ಯ, ಹೊನ್ನಾವರದ ಹಗಣ ನೃತ್ಯ, ಗದಗ ಜಿಲ್ಲೆಯ ಜಾನಪದ ಕಲಾಮೇಳ ಸೇರಿದಂತೆ ಇನ್ನೂ ಅನೇಕ ಕಲಾ ತಂಡಗಳು ಅಮೋಘ ಆಕರ್ಷಣೆ ನೀಡಿದವು.