ಹುಬ್ಬಳ್ಳಿ: 2023 ಕ್ಕೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಅವಿರತವಾಗಿ ಶ್ರಮವಹಿಸುತ್ತಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ದುರಾಡಳಿತ ಹೀಗೆ ಸಾಕಷ್ಟು ವಿಷಯಗಳಿವೆ. ಅವುಗಳನ್ನು ಬಗ್ಗೆ ಜನರ ಗಮನೆ ಸೆಳೆಯುತ್ತೇವೆ. ಯಳಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಮತ್ತೆ ಅಧಿಕಾರದ ಗದ್ದುಗೆ ಏರುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಮುಂದಿನ ಸಿಎಂ ಅಭ್ಯರ್ಥಿ ಚರ್ಚೆ ಸದ್ಯ ಅಪ್ರಸ್ತುವಾಗಿದೆ ಎಂದು ಪುನರುಚ್ಚಿಸಿದ ಅವರು, ನಮ್ಮ ಪಕ್ಷ ಸ್ಪಷ್ಟ ಬಹುಮತಕ್ಕೆ ಬರಬೇಕು. ಆ ಬಳಿಕ ಯಾರು ಸಿಎಂ ಅಭ್ಯರ್ಥಿ ಎಂಬುವುದನ್ನು ಹೈಕಮಾಂಡ್ ನಿರ್ಧರಿಸುತ್ತೆ. ಜತೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಷ್ಟೇ ಅಲ್ಲದೇ ಪಕ್ಷದಲ್ಲಿ ಹಲವು ಸಿಎಂ ಅಭ್ಯರ್ಥಿಗಳಿದ್ದಾರೆ ಎಂದರು.
ಬಿಜೆಪಿ ಬಗ್ಗೆ ಏನನ್ನು ಹೇಳಲಾರೆ!
ಯಡಿಯೂರಪ್ಪ ಅವರು, ಸಿಎಂ ಆಗಿ ಮುಂದುವರೆಯುತ್ತಾರೆ ಇಲ್ಲವೋ ಎಂಬುವುದು ನಮಗೆ ಬೇಕಿಲ್ಲ. ಶಾಸಕ ಹೇಳಿಕೆಗಳನ್ನು ನೋಡಿದರೆ ಬಿಜೆಪಿ ಪಕ್ಷದ ಎಲ್ಲವೂ ಸರಿಯಿಲ್ಲ ಅಂತಾ ಗೊತ್ತಾಗುತ್ತಿದೆ. ಆ ಪಕ್ಷದ(ಬಿಜೆಪಿ) ಬಗ್ಗೆ ನಾನು ಏನನ್ನು ಹೇಳಲಾರೆ. ನಾವು ಪಕ್ಷ ಸಂಘಟಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಎಸ್ಟಿ ಮೀಸಲಾತಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಶಾಸಕರು ರಾಜೀನಾಮೆ ನೀಡುವುದರಿಂದ ಸಮಸ್ಯೆಗೆ ಪರಿಹಾರ ದೊರಕಲ್ಲ. ಬದಲಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದಷ್ಟೇ ಹೇಳಿದರು.
2023 ಕಾರು ನಂಬರ್ ಮುಂದಿನ ಚುನಾವಣೆ ಟಾರ್ಗೆಟ್!
ಸ್ಮಶಾನ ಅಶುಭ ಎನ್ನುತ್ತಾರೆ. ಸ್ಮಶಾನವೂ ಕೂಡ ಒಳ್ಳೆಯ ಜಾಗ ಎಂಬ ಸಂದೇಶ ಸಾರಲು 2023 ನಂಬರ್ ಹೊಂದಿರುವ ನೂತನ ಕಾರನ್ನು ಸ್ಮಶಾನದಿಂದ ಚಾಲನೆ ನೀಡಲಾಗಿದೆ ಎಂದ ಅವರು, ಈ ಕಾರಿನ ನಂಬರ್ ಮುಂದಿನ ಚುನಾವಣೆ ಟಾರ್ಗೆಟ್ ಎಂದು ಮರು ಪ್ರಸ್ತಾಪಿಸಿದರು.