ಹಾವೇರಿ: ನಕಲಿ ಬಿಡಿ ಬೀಜ ದಾಸ್ತಾನು ಮಳಿಗೆ ಮೇಲೆ ಕೃಷಿ ವಿಷಕ್ಷಣಾ ತಂಡ ದಾಳಿ ನಡೆಸಿ ಸುಮಾರು 6 ಕೋಟಿ ರೂ. ಮೌಲ್ಯದ ಬಿಡಿ ಬೀಜಗಳನ್ನು ವಶ ಪಡೆದುಕೊಂಡಿದೆ.
ಗುರುವಾರ ರಾತ್ರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ರಾಷ್ಟ್ರೀ ಹೆದ್ದಾರಿಗೆ ಹೊಂದಿಕೊಂಡಿರುವ ವಕ್ರ ತುಂಡ ಕೋಲ್ಡ್ ಸ್ಟೋರೇಜ್ ಮೇಲೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ಹಾಗೂ ಬ್ಯಾಡಗಿ ಸಿಪಿಐ ಭಾಗ್ಯವತಿ ನೇತೃತ್ವದ ಜಂಟಿ ತಂಡಗಳ ದಾಳಿ ನಡೆಸಲಾಗಿತ್ತು.
ಮುಂಗಾರು ಬಿತ್ತನೆಗೆ ಸಿದ್ಧವಾಗಿರುವ ರೈತರಿಗೆ ಯಾವುದೇ ರೀತಿಯಲ್ಲಿ ಬಿತ್ತನೆಗೆ ತೊಂದರೆಯಾಗಬಾರದೆಂಬ ಮಹತ್ ಉದ್ದೇಶದಿಂದ ಕೃಷಿ ಸಚಿವ ಬಿ.ಸಿ.ಪಾಟೀಲ್ ದಿಟ್ಟ ಕ್ರಮಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ನಕಲಿ ಬೀಜ ಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಲು ಖಡಕ್ ಆದೇಶ ವಿಧಿಸಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕೃಷಿ ವಿಚಕ್ಷಣಾ ತಂಡ ಹಾಗೂ ಕೃಷಿ ಅಧಿಕಾರಿಗಳು ಸತತ ಬಿರುಸಿನ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಅದರನ್ವಯ ನಕಲಿ ಬಿಡಿ ಬೀಜಗಳನ್ನು ದಾಸ್ತಾನು ಮಾರಾಟ ಮಾಡಲು ಸಿದ್ಧವಾಗಿದ್ದ ಬೀಜ ಮಾರಾಟ ಕೇಂದ್ರದ ಮೇಲೆ ದಾಳಿ ಮಾಡಿದ್ದು, 2950 ಕ್ವಿ ನಕಲಿ ಬಿಡಿಬೀಜಗಳನ್ನು ಹಾಗೂ ಛತ್ರ ಗ್ರಾಮದ ವಕ್ರತುಂಡ ಕೋಲ್ಡ್ ಸ್ಟೋರೆಜ್ ನಲ್ಲಿ ಇರಿಸಲಾಗಿದ್ದ ಸುಮಾರು 2800 ಕ್ವಿ ನಕಲಿ ಬಿಡಿ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಸುಮಾರು ಆರು ಕೋಟಿ ರೂ.ಯಾಗಿದ್ದು, ಎಲ್ಲವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೃಷಿ ಇಲಾಖೆ ಪ್ರಕಟಣೆ ನೀಡಿದೆ.