ಬೆಳಗಾವಿ: ರೈತರ ಆದಾಯವನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ಬೆಳೆಗಳ ಮೌಲ್ಯವರ್ಧನೆ, ಆಧುನಿಕ ಕೃಷಿ ಉಪಕರಣಗಳ ಬಳಕೆ ಅಗತ್ಯ ಎಂದು ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಬಿ. ಆರ್. ಪಾಟೀಲ ಹೇಳಿದರು.
ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಗ್ರಾಮದ ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನಕೇಂದ್ರಕ್ಕೆ ಶೈಕ್ಷಣಿಕ ಅಧ್ಯಯನ ಪ್ರವಾಸದ ನಿಮಿತ್ತವಾಗಿ ಗುರುವಾರ ಭೇಟಿ ನೀಡಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವೀರಶೈವ ಸಮಿತಿ ಸದಸ್ಯರು, ಜಿಪಂ ಮಾಜಿ ಅಧ್ಯಕ್ಷರು, ರೈತರನ್ನು ಉದ್ದೇಶಿಸಿ ಮಾತನಾಡಿ, ಕೃಷಿ ವಲಯದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ರೈತರು ಕೂಡ ಬದಲಾಗುವುದರ ಜತೆಗೆ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದರು.
ವಿಜ್ಞಾನಿ ಡಾ.ಮಂಜುನಾಥ ಚೌರಡ್ಡಿ ಮಾತನಾಡಿ,ರೈತರ ಆದಾಯವನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ಬೆಳೆಗಳ ಮೌಲ್ಯವರ್ಧನೆ, ಆಧುನಿಕ ಕೃಷಿ ಉಪಕರಣಗಳ ಬಳಕೆ ಹಾಗೂ ಸುಧಾರಿತ ತಳಿಗಳ ಬಳಕೆ ಅತ್ಯಗತ್ಯ. ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ತರಕಾರಿ, ಸಂಯೋಜಿತ ಕೀಟ ನಿರ್ವಹಣೆ, ಜೈವಿಕ ಗೊಬ್ಬರಗಳ ಬಳಕೆ ಮತ್ತು ಮಣ್ಣಿನ ಫಲವತ್ತತೆ ಕಾಪಾಡುವ ಸುಧಾರಿತ ಕ್ರಮಗಳ ಅಗತ್ಯ ಎಂದು ತಿಳಿಸಿದರು.
ವಿಜ್ಞಾನಿ ಜಿ. ಬಿ. ವಿಶ್ವನಾಥ, ಡಾ. ಎಸ್. ಎಸ್. ಹಿರೇಮಠ, ಎಸ್. ಎಮ್. ವಾರದ, ಪ್ರವೀಣ ಯಡಹಳ್ಳಿ, ಡಾ. ಭಾವಿನಿ ಪಾಟೀಲ, ಡಾ. ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ ಇತರರಿದ್ದರು.
Laxmi News 24×7