Breaking News

ದೆಹಲಿ ರೆಸ್ಟೋರೆಂಟ್‌ ದುರಂತ – 2025ರಲ್ಲೂ ಜೈಲು ಸೇರಿದ್ದ ಹೋಟೆಲ್‌ ಮಾಲೀಕ

Spread the love

ನವದೆಹಲಿ: ಇತ್ತೀಚೆಗೆ ದೆಹಲಿಯ ರೆಸ್ಟೋರೆಂಟ್‌ ಒಂದರಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ 21 ಜನ ಸಾವನ್ನಪ್ಪಿದ್ದರು. ಈ ಅವಘಡದ ಬೆನ್ನಲ್ಲೇ ರೆಸ್ಟೋರೆಂಟ್‌ ಮಾಲೀಕನ ಕರಾಳ ಮುಖ ಒಂದೊಂದಾಗಿ ಹೊರಬರುತ್ತಿದೆ. ಈತ 2025ರಲ್ಲಿ ತಿಹಾರ್‌ ಜೈಲಿನಲ್ಲಿ 15 ದಿನ ಕಳೆದಿದ್ದ ಎಂದು ತಿಳಿದು ಬಂದಿದೆ.

ರೆಸ್ಟೋರೆಂಟ್‌ ಮಾಲೀಕ ಲವಕೇಶ್ ಬಜಾಜ್ (60) ಬಾಂಗ್ಲಾದೇಶಿ ಪ್ರಜೆಗಳಿಗೆ ನಕಲಿ ಭಾರತೀಯ ದಾಖಲೆಗಳನ್ನು ಪಡೆಯಲು ಸಹಾಯ ಮಾಡಿ 2025ರಲ್ಲಿ ಜೈಲು ಸೇರಿದ್ದ. ಹಣಕ್ಕಾಗಿ ತನ್ನ ನಿವಾಸದ ವಿಳಾಸದಲ್ಲಿ ಪಾಸ್‌ಪೋರ್ಟ್, ಭಾರತೀಯ ಗುರುತಿನ ದಾಖಲೆಗಳನ್ನು ಪಡೆಯಲು ಅನುಕೂಲ ಮಾಡಿದ್ದ. ಇದರಿಂದಾಗಿ ಆತ ಪುನರಾವರ್ತಿತ ಅಪರಾಧಿ ಎಂದು ಪೊಲೀಸರು ಶಂಕಿಸಿದ್ದಾರೆ.

ಜನವರಿ 29, 2025 ರಂದು ಮಧ್ಯ ದೆಹಲಿಯ ಪಹರ್‌ಗಂಜ್ ಪ್ರದೇಶದಲ್ಲಿ ಬಾಂಗ್ಲಾದೇಶದ ಕುಟುಂಬವೊಂದು ನಕಲಿ ದಾಖಲೆಗಳನ್ನು ಬಳಸಿ ವಾಸಿಸುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು.

ಈ ಸುಳಿವಿನ ಮೇರೆಗೆ ಪೊಲೀಸರು ಒಂದು ಮನೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಒಬ್ಬ ಮಹಿಳೆ ತನ್ನ ಮಗಳು ಮತ್ತು ಅಪ್ರಾಪ್ತ ಮೊಮ್ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದು ಕಂಡುಬಂದಿತ್ತು. ಇಬ್ಬರು ಮಹಿಳೆಯರನ್ನು ಸ್ವೀಟಿ ಸರ್ಕಾರ್ ಅಲಿಯಾಸ್ ಬ್ಯೂಟಿ ಹವ್ಲಾದರ್ ಅಲಿಯಾಸ್ ಜೋಹ್ರಾ ಖಾಟೂನ್ ಮತ್ತು ಆಕೆಯ ಮಗಳು ಪುಷ್ಪೋ ಸರ್ಕಾರ್ ಅಲಿಯಾಸ್ ಪುಷ್ಪೋ ಹವ್ಲಾದರ್ ಅಲಿಯಾಸ್ ಪುಷ್ಪೋ ಸೈಯಾದ ಅಕ್ತರ್ ಎಂದು ಗುರುತಿಸಲಾಗಿತ್ತು. ತನಿಖೆಯ ಸಮಯದಲ್ಲಿ, ಅವರು ಯಾವುದೇ ಮಾನ್ಯ ಗುರುತಿನ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದರು.

ಶೋಧದ ಸಮಯದಲ್ಲಿ ಎರಡು ಬಾಂಗ್ಲಾದೇಶಿ ಪಾಸ್‌ಪೋರ್ಟ್‌ಗಳು, ಒಂದು ಭಾರತೀಯ ಪಾಸ್‌ಪೋರ್ಟ್, ಹಲವಾರು ಆಧಾರ್ ಕಾರ್ಡ್‌ಗಳು ಮತ್ತು ಬ್ಯಾಂಕ್ ಸಂಬಂಧಿತ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಮೂರು ಪಾಸ್‌ಪೋರ್ಟ್‌ಗಳಲ್ಲಿನ ಫೋಟೋ ಒಂದೇ ಮಹಿಳೆಯದ್ದಾಗಿತ್ತು. ವಶಪಡಿಸಿಕೊಂಡ ಆಧಾರ್ ಕಾರ್ಡ್‌ಗಳು ವಿಭಿನ್ನ ಹೆಸರುಗಳು ಮತ್ತು ವಿಳಾಸಗಳನ್ನು ಹೊಂದಿದ್ದವು. ಆದರೆ ಎಲ್ಲಾ ಆಧಾರ್‌ ಕಾರ್ಡ್‌ಗಳಲ್ಲೂ ಒಂದೇ ಫೋಟೋ ಇತ್ತು.

ಆರೋಪಿ ಸ್ವೀಟಿ ಸರ್ಕಾರ್, ನಕಲಿ ಭಾರತೀಯ ಪಾಸ್‌ಪೋರ್ಟ್‌ನಲ್ಲಿ ಚತ್ತರ್‌ಪುರ್ ಎನ್‌ಕ್ಲೇವ್‌ನ ವಿಳಾಸವಿತ್ತು. ಈ ವಿಳಾಸದ ಪರಿಶೀಲನೆ ನಡೆಸಿದಾಗ ಅದು ದಕ್ಷಿಣ ದೆಹಲಿಯ ಸಾಕೇತ್ ನಿವಾಸಿ ಲವ್‌ಕೇಶ್ ಬಜಾಜ್‌ಗೆ ಸೇರಿದ್ದು ಎಂದು ತಿಳಿದುಬಂದಿತ್ತು.

ವಿಚಾರಣೆ ನಡೆಸಿದಾಗ ಹಣಕ್ಕಾಗಿ ಗುರುತಿನ ದಾಖಲೆಗಳನ್ನು ಪಡೆಯಲು ವಸತಿ ವಿಳಾಸವನ್ನು ಬಳಸಲು ಅವಕಾಶ ನೀಡಿದ್ದಾಗಿ ಬಜಾಜ್ ಒಪ್ಪಿಕೊಂಡಿದ್ದ. ಬಳಿಕ ಆತನನ್ನು ಬಂಧಿಸಿ ತಿಹಾರ್‌ ಜೈಲಿಗೆ ಕಳುಹಿಸಲಾಗಿತ್ತು. 15 ದಿನಗಳ ಬಳಿಕ ಆತ ಜಾಮೀನು ಪಡೆದಿದ್ದ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ದೆಹಲಿಯ ಮಾಳವೀಯ ನಗರದಲ್ಲಿರುವ ಲವಕೇಶ್ ಬಜಾಜ್ ಮಾಲೀಕತ್ವದ ಫ್ಲೋರಿಶ್ ಸ್ಟೇ ರೆಸ್ಟೋರೆಂಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ 12 ವಿದೇಶಿ ಪ್ರಜೆಗಳು ಸೇರಿದಂತೆ 21 ಜನರು ಸಾವನ್ನಪ್ಪಿದ್ದರು. ಇದಾದ ಬಳಿಕ ಮಾಲೀಕ ನನ್ನು ಬಂಧಿಸಿ 4 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು.


Spread the love

About Laxminews 24x7

Check Also

ರಾಮಲಿಂಗಾರೆಡ್ಡಿ ನನ್ನ ಆಪ್ತ ಸ್ನೇಹಿತರು, ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ: ಡಿಕೆಶಿ

Spread the loveಬೆಂಗಳೂರು: ರಾಮಲಿಂಗಾರೆಡ್ಡಿಯವರುನಮ್ಮ ಪಕ್ಷದ ಹಿರಿಯ ನಾಯಕರು. ನನ್ನ ಆಪ್ತ ಸ್ನೇಹಿತರು. ಅವರ ಅಸಮಾಧಾನವನ್ನು ಮಾತಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ