ಬೆಂಗಳೂರು : ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆಸಲಿದ್ದಾರೆ ಸಿಎಂ ಯಡಿಯೂರಪ್ಪ, ಹೌದು, ಕೊರೋನಾ ಹೊಡೆತಕ್ಕೆ ರಾಜ್ಯ ತತ್ತರಿಸಿರುವ ಹಿನ್ನೆಲೆಯಲ್ಲಿ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ.
ಆಡಳಿತ ಯಂತ್ರಕ್ಕೆ ಹಿಡಿದಿರುವ ಕಿಲುಬನ್ನು ತಿಕ್ಕಿ ತೊಳೆಯಲು ಬಯಸಿರುವ ಸಿಎಂ ಇದಕ್ಕಾಗಿ ಪೂರ್ವಭಾವಿ ತಯಾರಿ ಆರಂಭಿಸಿದ್ದಾರೆ. ಆಡಳಿತ ಯಂತ್ರ ದುಬಾರಿ ವೆಚ್ಚದ್ದಾಗಿ ಪರಿಣಮಿಸಿರುವುದರಿಂದ ಮೊದಲು ತಮ್ಮ ಸಿಬ್ಬಂದಿಗಳು ಹಾಗೂ ಸಚಿವರ ಸಿಬ್ಬಂದಿಗಳ ಸಂಖ್ಯೆಗೆ ಸಿಎಂ ಕತ್ತರಿ ಹಾಕಲಿದ್ದಾರೆ.
ಮುಖ್ಯಮಂತ್ರಿಗಳು ಹಾಗೂ ಸಚಿವರ ಹೆಸರಿನಡಿ ಇರುವ ಸಿಬ್ಬಂದಿಗಳ ಸಂಖ್ಯೆ 1200 ರಷ್ಟಿರುವುದು ಮುಖ್ಯಮಂತ್ರಿಗಳಿಗೇ ತಲೆನೋವುಂಟು ಮಾಡಿದೆ. ತಮ್ಮ ಅಡಿ ಐನೂರರಷ್ಟು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರೆ ಸಂಪುಟದ ಹಲವರು ಅಗತ್ಯ ಮೀರಿ ಸಿಬ್ಬಂದಿಗಳನ್ನು ನೇಮಿಸಿಕೊಂಡು ಕಛೇರಿ, ಮನೆಗಲ್ಲದೆ,ಮಗ,ಮಗಳ,ಸಂಬಂಧಿಕರ ಕುಟುಂಬಗಳ ಮನೆ ಕೆಲಸಗಳಿಗೂ ನೇಮಕ ಮಾಡಿಕೊಂಡಿದ್ದಾರೆ.
ಒಬ್ಬ ಹಿರಿಯ ಸಚಿವರು ಎಪ್ಪತ್ತೈದು ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಮನೆ,ಮಕ್ಕಳು,ಕುಟುಂಬದ ಹಲವರ ಸೇವೆಗೆ ಬಳಸಿಕೊಳ್ಳುತ್ತಿರುವ ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ ತಲುಪಿದೆ.
ಕೊರೋನಾ ಸೃಷ್ಟಿಸಿದ ಅವಾಂತರ ರಾಜ್ಯದ ಬೊಕ್ಕಸದ ಮೇಲೆ ಸುನಾಮಿಯಂತೆ ಅಪ್ಪಳಿಸಿದ್ದು ಈ ಹಿನ್ನೆಲೆಯಲ್ಲಿ ಸೋರಿಕೆಯ ಜಾಗಗಳನ್ನು ಮೊದಲು ಮುಚ್ಚಬೇಕು ಎಂಬುದು ಸಿಎಂ ಬಯಕೆಯಾಗಿದೆ.