Breaking News
Home / ಜಿಲ್ಲೆ / ಕೋವಿಡ್-19ಗೆ ಸಂಬಂಧಿಸಿದಂತೆ ಆಪ್ತಮಿತ್ರ ಸಹಾಯವಾಣಿ ಮತ್ತು ಆ್ಯಪ್‍ಗೆ ಸಿಎಂ ಚಾಲನೆ …..

ಕೋವಿಡ್-19ಗೆ ಸಂಬಂಧಿಸಿದಂತೆ ಆಪ್ತಮಿತ್ರ ಸಹಾಯವಾಣಿ ಮತ್ತು ಆ್ಯಪ್‍ಗೆ ಸಿಎಂ ಚಾಲನೆ …..

Spread the love

ಬೆಂಗಳೂರು,ಏ.22- ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಕ ರೋಗ ಕೊರೊನಾ ವೈರಸ್ ಹರಡುವಿಕೆ ಶೀಘ್ರದ ಲ್ಲೇ ನಿಯಂತ್ರಣಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋವಿಡ್-19ಗೆ ಸಂಬಂಧಿಸಿದಂತೆ ಆಪ್ತಮಿತ್ರ ಸಹಾಯವಾಣಿ ಮತ್ತು ಆ್ಯಪ್‍ಗೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು, ಸಾರ್ವಜನಿಕರು ಮನೆಯಲ್ಲೇ ಇದ್ದು ಸಹಕರಿಸಬೇಕು. ಕೊರೊನಾ ಹೋರಾಟದಲ್ಲಿ ಈಗ ಮತ್ತೊಂದು ಹೆಜ್ಜೆ ಇಡಲಾಗಿದೆ ಎಂದರು.

ಸಹಾಯವಾಣಿಯ ಉದ್ದೇಶ ರಾಜ್ಯದ ಎಲ್ಲಾ ನಿವಾಸಿಗಳಿಗೆ ವಿಶೇಷವಾಗಿ ಕೊರೊನಾ ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ವಾಸಿಸುವವರಿಗೆ ಒಣ ಕೆಮ್ಮು, ಉಸಿರಾಟದ ತೊಂದರೆ, ಇನ್ಫ್ಲ್ಯೂಯೆಂಜದಂತಹ ರೋಗದ ಲಕ್ಷಣ ಇದ್ದವರಿಗೆ ಸಲಹೆ, ಮಾರ್ಗದರ್ಶನ ನೀಡುವ ಮೂಲಕ ಚಿಕಿತ್ಸೆ ಪಡೆಯಲು ಸಹಕಾರಿಯಾಗುವುದು ಈ ಸಹಾಯವಾಣಿ ಮತ್ತು ಆ್ಯಪ್‍ನ ಉದ್ದೇಶವಾಗಿದೆ.

ಸಹಾಯವಾಣಿ ಸಂಖ್ಯೆ 14410ಗೆ ಕರೆ ಮಾಡುವ ಮೂಲಕ ಸಲಹೆ ಮಾರ್ಗದರ್ಶನ ಪಡೆಯಬಹುದು ಎಂದು ಹೇಳಿದರು. ಕೋವಿಡ್ ಸೋಂಕಿನ ಲಕ್ಷಣ ಇರುವವರು ಆಸ್ಪತ್ರೆಗೆ ಬರುವುದನ್ನು ತಪ್ಪಿಸಲು ಮತ್ತು ಇತರರಿಗೆ ರೋಗ ಹರಡುವುದನ್ನು ತಡೆಯಲು ಇದರಿಂದ ನೆರವಾಗಲಿದೆ. ಸೋಂಕಿನ ಲಕ್ಷಣ ಉಳ್ಳವರಿಗೆ ಅಗತ್ಯ ಸಲಹೆ ನೀಡಿ ಸೂಕ್ತ ಚಿಕಿತ್ಸೆಗೆ ನೆರವಾಗಬಹುದಾಗಿದೆ ಎಂದರು.

ದೈನಂದಿನ ವಸ್ತುಗಳಿಗೆ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಅಗತ್ಯ ವಸ್ತುಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಹೋಂ ಡೆಲಿವರಿ ಸಹಾಯವಾಣಿಗೆ ನಿನ್ನೆ ಚಾಲನೆ ನೀಡಲಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಹಾಗೂ ಸಾರ್ವಜನಿಕರಿಗೆ ಅಗತ್ಯ ಸೇವೆ ಕಲ್ಪಿಸಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯಕೀಯ ಪೊಲೀಸ್ ಮತ್ತಿತರ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸಿದರು.

# ಆ್ಯಪ್‍ನ ಉದ್ದೇಶ:
ಕೊರೊನಾ ರೋಗಲಕ್ಷಣಗಳಂತಹ ಅಥವಾ ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯ ಹೊಂದಿರುವವರನ್ನು ಈ ಆ್ಯಪ್ ಮೂಲಕ ಗುರುತಿಸಲಾಗುತ್ತದೆ. ಕಡಿಮೆ ಅಪಾಯವಿರುವ ಆದರೆ ಕೊರೊನಾ ತರಹದ ಕೆಲವು ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಅವರಿಗೆ ಕೌಂಟರ್‍ನಲ್ಲಿ ದೊರೆಯುವ ಔಷಧಿಗಳನ್ನು ಟೆಲಿಮೆಡಿಸಿನ್ ಮೂಲಕ ಒದಗಿಸುವುದು ಮತ್ತು ಸ್ವಯಂ ದಿಗ್ಭಂಧನಕ್ಕೆ ಒಳಪಡುವ ಬಗ್ಗೆ ಅವರಿಗೆ ಸಮಾಲೋಚಿಸಿ ಸೂಚಿಸಲಾಗುತ್ತದೆ.

ಹಾಟ್‍ಸ್ಪಾಟ್‍ಗಳು, ಕ್ಲಸ್ಟರ್‍ಗಳು ಮತ್ತು ರೋಗ ಹೊರಹೊಮ್ಮುತ್ತಿರುವ ಪ್ರದೇಶಗಳಲ್ಲಿ ದಿಗ್ಬಂಧನ ಕ್ರಮಗಳನ್ನು ಹೆಚ್ಚಿಸುವುದು ಮತ್ತು ಇದೇ ರೀತಿ ರೋಗ ಲಕ್ಷಣಗಳು ಕಡಿಮೆ ಇರುವ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನಾರಂಭಿಸಲು ಪ್ರಸ್ತುತ ಲಾಕ್‍ಡೌನ್‍ಅನ್ನು ಶ್ರೇಣೀಕೃತ ಸಡಿಲಗೊಳಿಸುವ ನಿರ್ಧಾರಗಳನ್ನು ತಿಳಿಯಲು ಅನಾರೋಗ್ಯ ಪ್ರಕರಣಗಳನ್ನು ವಿಶ್ಲೇಷಿಸಲು ಇದು ಸಹಾಯವಾಗಲಿದೆ.

ಆಪ್ತಮಿತ್ರ ಸಹಾಯವಾಣಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನ 4 ಕೇಂದ್ರಗಳು, ಮೈಸೂರು, ಮಂಗಳೂರು (ಬಂಟ್ವಾಳ) ಹೀಗೆ 6 ಸ್ಥಳಗಳಲ್ಲಿ ಒಟ್ಟು 300 ಆಸನ ಸಾಮಥ್ರ್ಯ ಹೊಂದಿರುವ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದು ಎರಡು ಹಂತದ ವ್ಯವಸ್ಥೆಯಾಗಿದ್ದು, ಮೊದಲ ಹಂತವನ್ನು ಆಯುಷ್/ನರ್ಸಿಂಗ್/ ಫಾರ್ಮಾ ಅಂತಿಮ ವರ್ಷದ ಸ್ವಯಂ ಸೇವಕ ವಿದ್ಯಾರ್ಥಿಗಳು ನಿರ್ವಹಿಸುತ್ತಾರೆ.

ಎರಡನೆ ಹಂತವನ್ನು ಎಂಬಿಬಿಎಸ್, ಇಂಟಿಗ್ರೇಟೆಡ್ ಮೆಡಿಸಿನ್, ಆಯುಷ್ ಸ್ವಯಂ ಸೇವಕ ವೈದ್ಯರು ನಿರ್ವಹಿಸಲಿದ್ದು,ಅಪಾಯದ ಮËಲ್ಯಮಾಪನ, ಸಮಾಲೋಚನೆ, ಟೆಲಿಮಡಿಸಿನ್ ಹಾಗೂ ವಿವರವಾದ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ತಜ್ಞ ವೈದ್ಯರಿಗೆ ಉಲ್ಲೇಖಿಸಲು ಆಯಾ ಸ್ಥಳಗಳಿಂದ ಸಂಪರ್ಕಿಸುತ್ತಾರೆ.

ಸಹಾಯವಾಣಿ ರಾಜ್ಯದ ಎಲ್ಲಾ ಭಾಗಗಳ ನಿವಾಸಿಗಳನ್ನು ಒಳಗೊಳ್ಳುತ್ತದೆ. ಕೊರೊನಾ ಸಾಂಕ್ರಾಮಿಕ ರೋಗವನ್ನು ನಿವಾರಿಸುವ ನಮ್ಮ ಸಾಮೂಹಿಕ ಪ್ರಯತ್ನಗಳಲ್ಲಿ ಈ ಸಹಾಯವಾಣಿ ಜೊತೆಗೆ ಕೊರೋನಾ ಕಾಯಿಲೆಗೆ ಹೊರತಾದ ಆರೋಗ್ಯ ಸಮಸ್ಯೆಗಳಿಗೆ ಸಾಮಾನ್ಯ ಸಹಾಯವಾಣಿ 104, ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ತುರ್ತು ಸಹಾಯವಾಣಿ 108 ಮತ್ತು ಆಹಾರ ಸಂಬಂಧಿತ ಸಮಸ್ಯೆಗಳಿಗೆ 155214 ಪೂರಕವಾಗಿರುತ್ತವೆ.

ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಪಿ. ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

Spread the love ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಮೇಲೆ ಭಾರತಕ್ಕೆ ಕಪ್ಪುಚುಕ್ಕೆಯಾಗಿರುವ ಪಾಕ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ