ಬೆಳಗಾವಿ: ನೇಪಾಳದಲ್ಲಿ ಹೋಟೆಲ್ ಕೆಲಸಕ್ಕೆ ತೆರಳಿದ್ದ ಬೆಳಗಾವಿ ಯುವಕ ತನ್ನ ರೂಮ್ಮೇಟ್ನಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾನೆ.
ಖಾನಾಪುರ ಪಟ್ಟಣದ ನಿವಾಸಿ ಸಾಹಿಲ್ ರಿಯಾಜ್ ಅಹ್ಮದ್ ಮೋಮಿನ್ (25) ಕೊಲೆಯಾದ ಯುವಕ. ಈತ ನೇಪಾಳದ ಹೋಟೆಲ್ ಕೆಲಸಕ್ಕೆ ತೆರಳಿದ್ದ. ಜೊತೆಗಿದ್ದ ರೂಮ್ಮೇಟ್ ಆತನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಸಾಯಿಲ್ ಶವವನ್ನು ಭಾರತ ತರುವಂತೆ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪೊಲೀಸರ ಮೂಲಕ ಈ ಬಗ್ಗೆ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಕುಟುಂಬಸ್ಥರು ಬೇಡಿಕೊಂಡಿದ್ದಾರೆ.
ಕೆಲಸ ಅರಿಸಿ ಹೋಗಿದ್ದವನನ್ನ ಭೀಕರವಾಗಿ ಕೊಲೆಯಾಗಿದ್ದು, ಆತನ ದುರಂತ ಅಂತ್ಯಕ್ಕೆ ಕುಟುಂಬಸ್ಥರು ಹಾಗೂ ಸ್ಥಳೀಯರು ಕಂಬನಿ ಮಿಡಿದಿದ್ದಾರೆ.
ಸದ್ಯ ಲಭ್ಯವಾಗಿರುವ ಮಾಹಿತಿಯಂತೆ, ಸಾಹಿಲ್ ಯುವಕ ಮೊಮೀನ್ ಎಂಬಾತ ಕೆಲ ವರ್ಷಗಳ ಕಾಲ ದುಬೈ ಹಾಗೂ ಥೈಲ್ಯಾಂಡ್ನಲ್ಲಿ ಉದ್ಯೋಗ ಮಾಡಿದ್ದು, ಸುಮಾರು 25 ದಿನಗಳ ಹಿಂದೆ ನೇಪಾಳದ ಝಾಪಾ ಜಿಲ್ಲೆಯ ದಮಕದಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ. ಅಲ್ಲಿಯೇ ಸದ್ದಾಂ ಹುಸೇನ್ ಎಂಬ ವ್ಯಕ್ತಿಯೊಂದಿಗೆ ಒಂದೇ ಕೊಠಡಿಯಲ್ಲಿ ಮೊಮಿನ್ ವಾಸವಿದ್ದ ಎನ್ನಲಾಗಿದೆ.
ಘಟನೆಯ ಹಿಂದಿನ ದಿನ ಸಾಹಿಲ್ ಬೆಳಗಾವಿಯಲ್ಲಿದ್ದ ತಮ್ಮ ಸ್ನೇಹಿತನೊಬ್ಬನನ್ನು ಅದೇ ಹೋಟೆಲ್ನಲ್ಲಿ ಉದ್ಯೋಗಕ್ಕಾಗಿ ಕರೆಸಿಕೊಂಡಿದ್ದ ಎನ್ನಲಾಗಿದೆ. ರಾತ್ರಿ ಮೂವರೂ ಒಂದೇ ಕೊಠಡಿಯಲ್ಲಿ ಮಲಗಿದ್ದ ವೇಳೆ ಸಾಹಿಲ್ ಹಾಗೂ ಸದ್ದಾಂ ನಡುವೆ ವಾಗ್ವಾದ ನಡೆದಿತ್ತು. ಸ್ನೇಹಿತ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದ ಎನ್ನಲಾಗಿದೆ.
ನಿದ್ರೆಯಲ್ಲಿದ್ದ ಸಾಹಿಲ್ಗೆ ಚಾಕು ಇರಿತ
ಮುಂಜಾನೆ ನಿದ್ರೆಯಲ್ಲಿದ್ದ ಸಾಹಿಲ್ ಮೇಲೆ ಸದ್ದಾಂ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಸಾಹಿಲ್ ಕಿರುಚಾಟ ಕೇಳಿ ಆರೋಪಿಯನ್ನು ಹಿಡಿಯಲು ಯತ್ನಿಸಿದರೂ, ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡ ಸಾಹಿಲ್ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಖಾನಾಪುರದಲ್ಲಿರುವ ಸಾಹಿಲ್ ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬದವರು ಬೆಳಗಾವಿ ಜಿಲ್ಲಾ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ನೇಪಾಳ ಪೊಲೀಸರ ಸಹಯೋಗದೊಂದಿಗೆ ಮೃತದೇಹವನ್ನು ಭಾರತಕ್ಕೆ ತರಿಸುವುದು ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ನೇಪಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ಶೋಧ ಕಾರ್ಯ ಆರಂಭಿಸಿರುವುದಾಗಿ ಮೂಲಗಳು ತಿಳಿಸಿವೆ.