ನವದೆಹಲಿ, ಫೆ.8-ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ 3ನೇ ಬಾರಿ ಗೆಲುವಿನೊಂದಿಗೆ ಹ್ಯಾಟ್ರಿಕ್ ವಿಜಯ ಸಾಧಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿ.ಆರ್.ಲೈನ್ನಲ್ಲಿ ಇಂದು ತಮ್ಮ ಪತ್ನಿ ಸುನೀತಾ ಮತ್ತು ಪ್ರಥಮ ಬಾರಿ ಮತ ಚಲಾಯಿಸಲು ಅರ್ಹತೆ ಪಡೆದಿರುವ ಪುತ್ರ ಪುಳಕಿತ್ ಅವರೊಂದಿಗೆ ಹಕ್ಕು ಚಲಾಯಿಸಿದ ನಂತರ ಕೇಜ್ರಿವಾಲ್ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಉತ್ತಮ ಆಡಳಿತವನ್ನು ಮೆಚ್ಚಿ ದೆಹಲಿ ಜನತೆ ಎರಡು ಬಾರಿ ನಮಗೆ ಅಧಿಕಾರ ನೀಡಿದ್ದಾರೆ. ಅದು ಮೂರನೇ ಬಾರಿಯೂ ಮುಂದುವರೆಯುವ ವಿಶ್ವಾಸವಿದೆ ಎಂದರು.
ಗಣ್ಯಾತಿಗಣ್ಯರ ಮತದಾನ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರು ನಿರ್ಮಲ ಭವನದಲ್ಲಿ ಇಂದು ಮತ ಚಲಾಯಿಸಿದರು. ಕಳೆದ ವಾರವಷ್ಟೇ ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ತೆರಳಿ ವಿಶ್ರಾಂತಿಯಲ್ಲಿದ್ದ ಸೋನಿಯಾ ಇಂದು ಬೆಳಗ್ಗೆ ತಮ್ಮ ಪುತ್ರಿ ಪ್ರಿಯಾಂಕಾಗಾಂಧಿ ವಾದ್ರಾ ಅವರ ನೆರವಿನೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
ಔರಂಗಜೇಬ್ ನಗರದ ಎನ್.ಪಿ. ಸೆಕೆಂಡರಿ ಸ್ಕೂಲ್ ಮತಗಟ್ಟೆಯಲ್ಲಿ ರಾಹುಲ್ಗಾಂಧಿ ಮತ ಚಲಾವಣೆ ಮಾಡಿದರು. ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಬಿಜೆಪಿ ನಾಯಕ ರಾಮ್ಲಾಲ್ ಸೇರಿದಂತೆ ಅನೇಕ ಗಣ್ಯಾತಿ ಗಣ್ಯರು ಮತ ಚಲಾಯಿಸಿದ್ದಾರೆ. ದೆಹಲಿಯ ಸಿ.ಆರ್.ಪಾರ್ಕ್ ಪ್ರದೇಶದ ಮತಗಟ್ಟೆಯೊಂದರಲ್ಲಿ 111 ವರ್ಷದ ಕಾಳಿತಾರ ಮಂಡಲ್ ಎಂಬ ಶತಾಯುಷಿ ಮಹಿಳೆ ತಮ್ಮ ಮಗ, ಮೊಮ್ಮಕ್ಕಳು ಮತ್ತು ಕುಟುಂಬದ ಸದಸ್ಯರೊಂದಿಗೆ ಧಾವಿಸಿ ಮತ ಚಲಾಯಿಸಿದರು. ಮತದಾನ ಪವಿತ್ರ ಹಕ್ಕು. ಇದನ್ನು ಎಲ್ಲರೂ ಚಲಾಯಿಸಬೇಕು ಇದೇ ಸಂದರ್ಭದಲ್ಲಿ ಶತಾಯುಷಿ ಹೇಳಿದರು.