ಶಿವಮೊಗ್ಗ: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕ ಒಮ್ಮೆಲೆ ರಸ್ತೆಗೆ ಬಂದಿದ್ದು, ಈ ವೇಳೆ ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕಿನ ಗುಂಡುಗದ್ದೆಯಲ್ಲಿ ನಡೆದಿದೆ.
ಗುಂಡುಗದ್ದೆ ಗ್ರಾಮದ ನಿವಾಸಿ ಪ್ರಗತ್.ಕೆ.ಆರ್ ಮತ್ತು ರಂಜನಾ ದಂಪತಿ ಪುತ್ರ ಋಷ್ಯ.ಪಿ (7) ಮೃತಪಟ್ಟ ಬಾಲಕ. ಮನೆಯ ಬಳಿ ಮಧ್ಯಾಹ್ನದ ವೇಳೆಗೆ ಆಟವಾಡುತ್ತಿದ್ದ ಬಾಲಕ, ಒಮ್ಮೆಲೆ ರಸ್ತೆಗೆ ಬಂದಿದ್ದಾನೆ. ಈ ವೇಳೆ ಕಾರು ಡಿಕ್ಕಿಯಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಕರೆತರಲಾಗಿತ್ತು. ತಲೆಗೆ ಗಂಭೀರ ಗಾಯವಾಗಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮನೆಯ ಬಳಿ ರಸ್ತೆಯಲ್ಲಿ ಲಾರಿ ನಿಂತಿದ್ದರಿಂದ ಬಾಲಕ ರಸ್ತೆಗೆ ಬಂದಿದ್ದು, ಕಾಣಿಸದೇ ಕಾರು ಡಿಕ್ಕಿಯಾಗಿದೆ ಎನ್ನಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7