ಅಥಣಿ (ಬೆಳಗಾವಿ ಜಿಲ್ಲೆ): ‘ಯಾವುದೇ ಕಾರಣ ಕೊಡದೇ ನನ್ನನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ತೆಗೆದರು. ನಾನೇನು ರೇಪ್ ಮಾಡಿದ್ದೀನಾ, ಯಾರದಾದರೂ ಸೆರಗು ಎಳೆದಿದ್ದೀನಾ, ಭ್ರಷ್ಟಾಚಾರ ಮಾಡಿದ್ದೀನಾ? ಹೇಳದೇ ಕೆಳದೇ ಆ ಸ್ಥಾನ ಕಸಿದುಕೊಂಡರು’ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಟೀಕಾಪ್ರಹಾರ ಮಾಡಿದರು.
ಪಟ್ಟಣದಲ್ಲಿ ಗುರುವಾರ ಮಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ನನಗೆ ಮಾನಸಿಕವಾಗಿ ಹಿಂಸೆ, ಅವಮಾನ ಮಾಡುತಿದ್ದರು. ಎಲ್ಲ ಸಹಿಸಿಕೊಂಡು ಮುಂದುವರಿದಿದ್ದೆ. ಉಪ ಮುಖ್ಯಮಂತ್ರಿ ಸ್ಥಾನ ಕಿತ್ತುಕೊಂಡಾಗಲೂ ನಾನು ಯಾರಿಗೂ ಏನೂ ಅಂದಿಲ್ಲ. ರಾಜೀನಾಮೆ ಕೊಡು ಎಂದರೆ ಸಂತೋಷದಿಂದ ಕೊಡುತ್ತಿದ್ದೆ. ಅವಮಾನ ಮಾಡುವ ಉದ್ದೇಶದಿಂದ ಏಕಾಏಕಿ ತೆಗೆದರು. ಆದರೆ, ಈಗ ಸಂಯಮ ಕಟ್ಟೆಯೊಡೆದಿದೆ’ ಎಂದರು.
‘ಗುರುವಾರ ಬೆಳಿಗ್ಗೆ ಬಿ.ಎಲ್. ಸಂತೋಷ ಅವರು ನಾಲ್ಕಾರು ಬಾರಿ ಮೊಬೈಲ್ ಕರೆ ಮಾಡಿದರೂ ನಾನು ಸ್ವೀಕರಿಸಲಿಲ್ಲ. ಅವರು ನನ್ನ ಗುರು. ನಾನೂ ಆವೇಶದಲ್ಲಿ ಏನೋ ಮಾತನಾಡಿ ಅವರಿಗೆ ಬೇಸರ ತರುವುದು ಬೇಡ ಎಂಬ ಕಾರಣಕ್ಕೆ ಮಾತನಾಡಿಲ್ಲ. ಸಂಸದ ಅಣ್ಣಾಸಾಹೇಬ ಜೊಲ್ಲೆ ಕೂಡ ಮಧ್ಯಾಹ್ನ ಭೇಟಿ ಮಾಡಿ ಹೋದರು. ಅವರು ಸೌಜನ್ಯದ ಭೇಟಿಗೆ ಬಂದಿದ್ದರು. ರಾಜಕೀಯ ಏನೂ ಮಾತನಾಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಟಿಕೆಟ್ ಸಲುವಾಗಿ ಮಾತ್ರ ನಾನು ಪಕ್ಷ ಬಿಡುತ್ತಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಮಾಡಿದ್ದರಿಂದ ಬಿಡುತ್ತಿದ್ದೇನೆ. ಶುಕ್ರವಾರ ಬೆಳಿಗ್ಗೆ ಬೆಂಗಳೂರಿಗೆ ಹೋಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ’ ಎಂದರು.