ರಾಣೆಬೆನ್ನೂರ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಎನ್ಡಬ್ಲೂೃಕೆಎಸ್ಆರ್ಟಿಸಿ ಅಧ್ಯಕ್ಷ ಡಾ. ಬಸವರಾಜ ಕೇಲಗಾರ ತಮಗೆ ನೀಡಿದ ಸರ್ಕಾರದ ಕಾರನ್ನು ತಾವೇ ಸ್ವತಃ ಬಸ್ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಿ ಸರಿಯಾಗಿ ಬೆಳಗ್ಗೆ 11.30ಕ್ಕೆ ಅಧಿಕಾರಿಗಳಿಗೆ ಹಸ್ತಾಂತರ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಡಾ. ಬಸವರಾಜ ಕೇಲಗಾರ ಅವರನ್ನು ಆರಂಭದಲ್ಲಿ ಎನ್ಡಬ್ಲೂೃಕೆಎಸ್ಆರ್ಟಿಸಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಕಳೆದ ಎರಡ್ಮೂರು ತಿಂಗಳ ಹಿಂದೆ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರ ಓಡಾಟಕ್ಕೆ ಸರ್ಕಾರಿ ವಾಹನ ನೀಡಲಾಗಿತ್ತು. ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಅವರೇ ಸ್ವತಃ ಹೋಗಿ ಕಾರನ್ನು ವಾಪಸ್ ಕೊಟ್ಟು ಬಂದಿದ್ದಾರೆ.
‘ಎಷ್ಟೋ ಜನ ನೀತಿ ಸಂಹಿತೆ ಜಾರಿ ಆಗಿದ್ದರೂ ಕಾರು ವಾಪಸ್ ಕೊಡಲು ಇಲ್ಲಸಲ್ಲದ ನೆಪ ಹೇಳುತ್ತಾರೆ. ಆದರೆ, ನಾವು ಸ್ವಚ್ಛ ರಾಜಕಾರಣಿ ಆಗಬೇಕು ಎಂಬ ಉದ್ದೇಶದಿಂದ ನಾನೇ ಹೋಗಿ ಕಾರನ್ನು ಕೊಟ್ಟು ಬಂದಿದ್ದೇನೆ’ ಎಂದು ಅವರು ವಿಜಯವಾಣಿಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.