ಬೆಂಗಳೂರು: ‘ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಪ್ರಕರಣದಲ್ಲಿ ಕಾನೂನಿನಲ್ಲಿ ಏನೆಲ್ಲ ಮಾಡಬೇಕೊ ಅದಕ್ಕೆ ಲೋಕಾಯುಕ್ತ ಸ್ವತಂತ್ರವಾಗಿದೆ. ಲೋಕಾಯುಕ್ತ ಎಲ್ಲವನ್ನೂ ಮಾಡಬಹುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಲೋಕಾಯುಕ್ತಕ್ಕೆ ಯಾವುದೇ ತಡೆ ಇಲ್ಲ’ ಎಂದರು.
ಮಂಡ್ಯದಲ್ಲಿ ಪ್ರಧಾನಿ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಇನ್ನೂ ಯಾವುದೂ ಅಂತಿಮ ಆಗಿಲ್ಲ’ ಎಂದರು.
‘ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಯೋಜನೆ ಮಾಡಲಾಗಿದೆ. ಪ್ರಧಾನಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇವೆ. ಮೋದಿ ಜೊತೆ ಮಾತಾಡಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಅಂತಿಮಗೊಳಿಸುತ್ತೇವೆ’ ಎಂದರು.
ಮಂಡ್ಯದಲ್ಲಿ ರೋಡ್ ಶೋ ರದ್ದು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಎಸ್ಪಿಜಿ ಅವರು ಮತ್ತು ನಾವು ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಈ ಬಗ್ಗೆಯೂ ಪ್ರಧಾನಿ ಅವರ ಬಳಿ ಮಾತನಾಡಿ ನಿರ್ಧಾರ ಮಾಡುತ್ತೇವೆ’ ಎಂದರು.